
ಯಾದಗಿರಿ: ನಗರ ಸಮೀಪದ ಯಾದಗಿರಿ– ಶಹಾಪುರ ಹೆದ್ದಾರಿಯ ರೈಲ್ವೆ ಹಳಿ ಮೇಲ್ಸೇತುವೆ ಹಾಗೂ ಭೀಮಾ ನದಿಯ ಹಳೇ ಸೇತುವೆ ರಸ್ತೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆಗೋಡೆಗಳು ಇಲ್ಲದೆ ನಿತ್ಯ ಸಾವಿರಾರು ವಾಹನಗಳ ಚಾಲಕರು, ಪ್ರಯಾಣಿಕರು ಜೀವ ಭಯದಲ್ಲಿ ಓಡಾಡುವಂತಿದೆ.
ಹದಗೆಟ್ಟು ಕಚ್ಚಾ ರಸ್ತೆಯಂತೆ ಆಗಿದ್ದ ಶುಭಾಷ್ ವೃತ್ತದಿಂದ ವಡಗೇರಾ ಕ್ರಾಸ್ ವರೆಗಿನ 2 ಕಿ.ಮೀ. ರಸ್ತೆಯನ್ನು ದುರಸ್ತಿ ಮಾಡಿ ಎರಡು ತಿಂಗಳು ಕಳೆದಿವೆ. ಇದುವರೆಗೂ ತಡೆಗೋಡೆಗಳ ನಿರ್ಮಾಣವಾಗಿಲ್ಲ. ಸೇತುವೆಗಳ ರಸ್ತೆಗಳಿಗೆ ತಡೆಗೋಡೆಗಳು ಇಲ್ಲದೆ ಇರುವುದು ಜನರ ಜೀವಕ್ಕೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ– ಶಹಾಪುರ ಹೆದ್ದಾರಿ ಮೂಲಕವೇ ಸುರಪುರ, ಹುಣಸಗಿ, ವಡಿಗೇರಾ ಮತ್ತು ಶಹಾಪುರ ತಾಲ್ಲುಕುಗಳಿಗೆ ಹಾಗೂ ನೆರೆಯ ಜಿಲ್ಲೆಗಳಾದ ವಿಜಯಪುರ, ರಾಯಚೂರಿಗೂ ತೆರಳಬಹುದು. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಚೇರಿ ಕೆಲಸ, ಖಾಸಗಿ ಕಾರ್ಯಕ್ರಮ, ವ್ಯಾಪಾರ ವಹಿವಾಟಿಗಾಗಿ ನಿತ್ಯ ಸಾವಿರಾರು ಜನರು ನಗರಕ್ಕೆ ಬಂದು ಹೋಗುತ್ತಾರೆ. ಇಷ್ಟೊಂದು ವಾಹನ ದಟ್ಟಣೆಯ ಈ ರಸ್ತೆಯಲ್ಲಿಲ ಸೇತುವೆಗಳಿಗೆ ತಡೆಗೋಡೆಗಳು ನಿರ್ಮಾಣ ಮಾಡದೆ ಇರುವುದು ಆಡಳಿತ ವ್ಯವಸ್ಥೆಯ ವೈಫಲ್ಯ ಎನ್ನುತ್ತಾರೆ ವಾಹನಗಳ ಚಾಲಕರು.
ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿ ವಾಹನಗಳು, ಸ್ಥಳೀಯ ಸಾರ್ವಜನಿಕರ ವಾಹನಗಳು ಸಂಚರಿಸುತ್ತವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳೂ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸಹಿತ ಸಾರ್ವಜನಿಕರು ಜೀವಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭೀಮಾ ನದಿಯ ಪಶ್ಚಿಮ ದಿಕ್ಕಿನಲ್ಲಿ ಸೇತುವೆಯ ಏರುಮುಖದ ರಸ್ತೆಯು ತಿರುವಿನ ಕೂಡಿದೆ. ದೊಡ್ಡ ವಾಹನ ಎದುರಿನಿಂದ ಬಂದು ಸ್ವಲ್ಪವೇ ಎಚ್ಚರ ತಪ್ಪಿದರೆ ಪ್ರಪಾತದಂತೆ ಇರುವ ತಗ್ಗಿಗೆ ಬೀಳಬೇಕಾಗುತ್ತದೆ. ರಾತ್ರಿಯ ಹೊತ್ತು ದಾರಿದೀಪ ಕೆಟ್ಟರಂತೂ ವಾಹನಗಳ ಸವಾರಿ ಅತ್ಯಂತ ಅಪಾಯಕಾರಿ ಆಗಿರುತ್ತದೆ. ಸೇತುವೆ ಮೇಲಿನ ಕಲ್ಲಿನ ತಡೆಗೋಡೆಯ ತುದಿಯಲ್ಲಿ ಸ್ವಲ್ಪವೇ ಆಯತಪ್ಪಿದರೆ ವಾಹನಗಳು ನೇರವಾಗಿ ನದಿ ಪಾಲಾಗುತ್ತವೆ. ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ತಡೆಗೋಡೆ ನಿರ್ಮಾಣ ಮಾಡಬೇಕಿದೆ ಎನ್ನುತ್ತಾರೆ ಸ್ಥಳೀಯರು.
ರೈಲ್ವೆ ಮೇಲ್ಸೇತುವೆಯೂ ಭೀಮಾ ನದಿ ಸೇತುವೆಯಷ್ಟೇ ಅಪಾಯಕಾರಿಯಾಗಿದೆ. ರಸ್ತೆಯ ಬದಿಯಲ್ಲಿನ ತಗ್ಗು ಪ್ರದೇಶದಲ್ಲಿ ಕಲ್ಲುಗಳು ಬಿದ್ದಿದ್ದು, ಮುಳ್ಳಿನ ಗಿಡಗಳು ಬೆಳೆದಿವೆ. ಹಳೇ ಬಸ್ ನಿಲ್ದಾಣವೂ ಸಮೀಪ ಇರುವುದರಿಂದ ಕೆಲವೊಮ್ಮೆ ವಾಹನ ದಟ್ಟಣೆಯಾದರೆ ಸೇತುವೆವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.
50 ಅಡಿಗೂ ಹೆಚ್ಚು ಆಳವಿರುವ ಸೇತುವೆಗೆ ತಡೆಗೋಡೆಗಳು ನಿರ್ಮಿಸಿ ಝೀಬ್ರಾ ಕ್ರಾಸ್ ಲೈನ್ ಬರೆಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು- ಉಮೇಶ ಮುದ್ನಾಳ, ಸಾಮಾಜಿಕ ಹೋರಾಟಗಾರ
‘ವಾರದಲ್ಲಿ ಕಾಮಗಾರಿ ಶುರು’
ಎರಡೂ ಸೇತುವೆಗಳ ಸ್ಟೀಲ್ ತಡೆಗೋಡೆಗಳ ಅಳವಡಿಕೆಯ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಕೆ ಮಾಡಲಾಗಿದ್ದು ಒಂದು ವಾರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ’ ಎಂದು ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರಶುರಾಮ ‘ಪ್ರಜಾವಾಣಿ’ಗೆ ತಿಳಿಸಿದರು. ‘ರೈಲ್ವೆ ಮತ್ತು ಭೀಮಾ ನದಿ ಸೇತುವೆಗಳ ಎರಡೂ ಕಡೆಗಳಲ್ಲಿ ಹೆಚ್ಚಿನ ಉದ್ದದ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಪ್ರಸ್ತಾವನೆ ಸಿದ್ಧವಾಗಿದ್ದು ಗುತ್ತಿಗೆದಾರ ಅನುದಾನದ ಅಂದಾಜು ಮಾಡಬೇಕಿದೆ. ಗುತ್ತಿಗೆದಾರಿನಿಗೆ ಯಾವುದೇ ಬಿಲ್ ಕೊಟ್ಟಿಲ್ಲ. ತಡೆಗೋಡೆ ನಿರ್ಮಾಣವನ್ನು ಶೀಘ್ರವೇ ಕೈಗೆತ್ತಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.