ADVERTISEMENT

27 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ

ಸುಸೂತ್ರವಾಗಿ ಪರೀಕ್ಷೆ ನಡೆಸಲು ಸನ್ನದ್ಧರಾಗಿ; ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 6:00 IST
Last Updated 3 ನವೆಂಬರ್ 2022, 6:00 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲ ಬುಧವಾರ ಟಿಇಟಿ ಪೂರ್ವಭಾವಿ ಸಭೆ ಜರುಗಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲ ಬುಧವಾರ ಟಿಇಟಿ ಪೂರ್ವಭಾವಿ ಸಭೆ ಜರುಗಿತು   

ಯಾದಗಿರಿ: ‘ಜಿಲ್ಲೆಯಲ್ಲಿ ನವೆಂಬರ್ 6ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಜರುಗಲಿದ್ದು, ಯಾವುದೇ ಅಕ್ರಮವಾಗದಂತೆ, ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಸನ್ನದ್ಧರಾಗಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾದಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜರುಗಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಟ್ಟು 27 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಬೆಳಿಗ್ಗೆ 9.30ರಿಂದ 12 ಗಂಟೆವರೆಗೆ ನಡೆಯುವ ಮೊದಲ ಅವಧಿಯ ಪರೀಕ್ಷೆಗೆ 5,295 ಜನ, ಮದ್ಯಾಹ್ನ 2 ರಿಂದ 4.30ವರೆಗೆ ನಡೆಯುವ ಎರಡನೆ ಅವಧಿಯ ಪರೀಕ್ಷೆಗೆ 6,528 ಅಭ್ಯರ್ಥಿಗಳು ಹಾಜರಾಗಲಿದ್ದು, ಒಟ್ಟು 11,823 ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದುತಿಳಿಸಿದರು.

ಪರೀಕ್ಷಾ ಬಂದೋಬಸ್ತ್‌ಗೆ ಸಮಯಕ್ಕಿಂತ ಮುಂಚಿತವಾಗಿಯೇ ನಿಗಧಿತ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿ ತೆರಳಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಪರೀಕ್ಷಾ ನಿಯಮಗಳ ಪಾಲಿಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ.ಪ್ರದೇಶದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಝರಾಕ್ಸ್, ಕಂಪ್ಯೂಟರ್ ಅಂಗಡಿಗಳು ಮುಚ್ಚುವಂತೆ ಸೂಚಿಸಿದರು.

ADVERTISEMENT

ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಅಭ್ಯರ್ಥಿಗಳು ಹಾಜರಾಗಬೇಕು, ತಡವಾದರೆ ಅವಕಾಶ ನೀಡಲಾಗದು. ಮೊಬೈಲ್ ಮತ್ತು ಕೈ ಗಡಿಯಾರ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಗೌಪ್ಯ ಸಾಮಾಗ್ರಿಗಳನ್ನು ಇಡಲು ಮತ್ತು ತೆಗೆಯಲು ಭದ್ರತೆಗೆ ಕ್ರಮವಹಿಸಿ ಎಂದು ಖಜಾನೆ ಇಲಾಖೆಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿಡಿಪಿಐ ಶಾಂತಗೌಡ ಪಾಟೀಲ, ಖಜಾನೆ ಅಧಿಕಾರಿ ಮಾಲಿಂಗರಾಯ ಬಿ., ಸಿಪಿಐ ದೀಪಕ ಭೂಸರೆಡ್ಡಿ ಹಾಗೂ ಪರೀಕ್ಷಾ ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತದಳ ಮತ್ತು ಪರೀಕ್ಷಾ ಮುಖ್ಯ ಅಧೀಕ್ಷಕರು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.