ಶಹಾಪುರ: ಕಳೆದ ಐದಾರು ದಿನದಿಂದ ಸುರಿದ ಜಿಟಿಜಿಟಿ ಮಳೆಯಿಂದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾದ ಸ್ಥಳಗಳಿಗೆ ಬುಧವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.
ಐದಾರು ದಿನದಿಂದ ಸುರಿದ ಜಿಟಿಜಿಟಿ ಮಳೆಯಿಂದ ತಗ್ಗು ಪ್ರದೇಶದ ಜಮೀನಗಳಲ್ಲಿ ನೀರು ಸಂಗ್ರಹವಾಗಿದೆ. ಬೆಳೆದು ನಿಂತ ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗೆ ಹೆಚ್ಚು ಮಳೆಯಾಗಿದ್ದರಿಂದ ಅಧಿಕ ತೇಂವಾಶಗೊಂಡು ಹಳದಿ ಬಣ್ಣಕ್ಕೆ ತಿರುಗಿವೆ.ಆದರೆ ಬೆಳೆಹಾನಿ ಮಾತ್ರ ತಪ್ಪಿದ್ದಲ್ಲ ಎಂದು ರೈತ ಮುಖಂಡ ಶರಣರಡ್ಡಿ ಹಾಗೂ ಮಲ್ಲಣ್ಣ ಮಂಡಗಳ್ಳಿ ಅವರು ಜಿಲ್ಲಾಕಾರಿಯ ಗಮನಕ್ಕೆ ತಂದರು.
ಅಲ್ಲದೆ ಜಿಲ್ಲಾಧಿಕಾರಿ ಅವರು ಕೃಷ್ಣಾ ನದಿ ಪಾತ್ರದ ಪ್ರವಾಹ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ನದಿ ಪಾತ್ರದ ಜನತೆ ನದಿಯಲ್ಲಿ ಇಳಿಯಬಾರದು. ಮುನ್ನೆಚ್ಚರಿಕೆವಹಿಸಬೇಕು ಎಂದು ಸಲಹೆ ನೀಡಿದರು.
ಸಮಧಾನದ ಸಂಗತಿಯೆಂದರೆ ಬುಧವಾರ ಮಳೆರಾಯ ಕಾಣಿಸಿಕೊಳ್ಳಲಿಲ್ಲ. ರೈತರು ಬೆಳಿಗ್ಗೆಯಿಂದ ಜಮೀನುಗಳಿಗೆ ತೆರಳಿ ತಗ್ಗು ಪ್ರದೇಶದಲ್ಲಿ ನಿಂತ ನೀರು ಬೇರೆಡೆ ಸಾಗಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಕಾಣಿಸಿತು.
ಅಲ್ಲದೆ ಬೆಳೆದು ನಿಂತ ಹೆಸರು ಕೀಳಲು ಮಹಿಳಾ ಕೂಲಿಕಾರ್ಮಿಕರು ಹಸಿಯಾದ ಜಮೀನಿನಲ್ಲಿ ಇಳಿದು ಕೆಲಸ ಆರಂಭಿಸಿದರು. ಆದರೆ ಹೆಚ್ಚಿನ ಮಳೆಯಾಗಿದ್ದರಿಂದ ಹೆಸರು ಬೆಳೆ ಕಪ್ಪಾಗಿದೆ. ಇನ್ನೂ ಹಸಿಯಾಗಿರುವುದರಿಂದ ಕೀಳಲು ತೊಂದರೆಯಾಗುತ್ತಲಿದೆ. ಜಮೀನುಗಳಲ್ಲಿಅಲ್ಲಲ್ಲಿ ನೀರು ನಿಂತಿವೆ. ಏನು ಮಾಡುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ರೈತ ಅಮರೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.