ADVERTISEMENT

ಸರ್ಕಾರಿ ಸೌಲಭ್ಯ ರೈತರಿಗೆ ತಲುಪಿಸಿ

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ: ಜಿಲ್ಲಾಧಿಕಾರಿ ಸ್ನೇಹಲ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 1:40 IST
Last Updated 22 ಜೂನ್ 2022, 1:40 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಕೃಷಿ ಇಲಾಖೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಕೃಷಿ ಇಲಾಖೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು   

ಯಾದಗಿರಿ: ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ದೇಶ ಸ್ವರೂಪ ಮತ್ತು ಅನುಷ್ಠಾನ ಪಟ್ಟಿಗಳ ಕುರಿತು ಹಾಗೂ ಕೃಷಿ ಅಭಿಯಾನ ಕಾರ್ಯಕ್ರಮದಡಿ ನೀಡುವ ಮಾಹಿತಿ ಫಲಿತಾಂಶಗಳ ಸಂಪೂರ್ಣ ವಿವರಗಳನ್ನು ರೈತರಿಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೃಷಿ ಇಲಾಖೆಯ ಯೋಜನೆಗಳಾದ ಕೃಷಿ ಅಭಿಯಾನ, ಮುಂಗಾರು ಹಂಗಾಮಿನ ಬೀಜ ರಸಗೊಬ್ಬರ ಪರಿಸ್ಥಿತಿ, ಬೆಳೆ ಸಮೀಕ್ಷೆ ಬೆಳೆ ವಿಮೆ, ಒಂದು ಜಿಲ್ಲೆ ಒಂದು ಉತ್ಪನ, ಉಳಿದ ಜಲಾನಯನ ಅಭಿವೃದ್ಧಿ ಯೋಜನೆ ಹಾಗೂ ರೈತ ಉತ್ಪಾದಕರ ಸಂಸ್ಥೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸಬೇಕು. ಒಂದು ರಸಗೊಬ್ಬರ ಜತೆಗೆ ನ್ಯಾನೋ ಯೂರಿಯಾ ಕಡ್ಡಾಯವಾಗಿ ಪಡೆಯುವಂತೆ ವಿತರಕರು ರೈತರಿಗೆ ಒತ್ತಾಯಿಸುತ್ತಿದ್ದಾರೆ ಎಂದು ಕೆಲವು ರೈತರು ದೂರುಗಳನ್ನು ಸಲ್ಲಿಸಿದ್ದು, ಈ ರೀತಿ ಒತ್ತಾಯ ಪೂರಕವಾಗಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ADVERTISEMENT

ಸತತ ರಾಸಾಯನಿಕ ರಸಗೊಬ್ಬರಗಳ ಬಳಕೆಯಿಂದ ನಾವು ತಿನ್ನುವ ಆಹಾರ ವಿಷಮಯವಾಗಿದ್ದು, ಸಾವಯವ ಗೊಬ್ಬರಗಳ ಬಳಕೆ ಮತ್ತು ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಮಣ್ಣು ನೀರು ಕಲುಷಿತವಾಗುವುದನ್ನು ತಡೆಗಟ್ಟಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಬೀಜ, ರಸಗೊಬ್ಬರ ಪರಿಸ್ಥಿತಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಜೂನ್‌ ತಿಂಗಳಿಂದ ಇಲ್ಲಯವರೆಗೆ 55.9 ಮಿ.ಮೀ ಮಳೆಯಾಗಬೇಕಾಗಿದ್ದು, ಆದರೆ, 55.1 ಮಿ.ಮೀ ಮಳೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಜೂನ್ ತಿಂಗಳ ಮಳೆ ಕೊರತೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

ಪ್ರಸುತ್ತ ಮುಂಗಾರು ಹಂಗಾಮಿಗೆ 3,90,210 ಹೆಕ್ಟೇರ್ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, ಮುಖ್ಯವಾಗಿ ಹತ್ತಿ 1,66,000 ಹೆಕ್ಟೇರ್, ತೊಗರಿ 96,000 ಹೆಕ್ಟೇರ್, ಭತ್ತ 87,000 ಹೆಕ್ಟೇರ್, ಹೆಸರು 26,000 ಹೆಕ್ಟೇರ್, ಸಜ್ಜೆ 10,000 ಹೆಕ್ಟೇರ್ ಗುರಿ ಹೊಂದಿದ್ದು, ಇಲ್ಲಿಯವರೆಗೆ ಕೇವಲ 15,832 ಹೆಕ್ಟೇರ್ ಶೇ 4.6 ಮಾತ್ರ ಬಿತ್ತನೆಯಾಗಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿಗೆ ವಿವಿಧ ರಸಗೊಬ್ಬರಗಳ ಏಪ್ರಿಲ್ ನಿಂದ ಜೂನ್‌ವರೆಗೆ 17,639 ಮೇ.ಟನ್ ಅವಶ್ಯಕತೆಯಿದ್ದು, ಇಲ್ಲಿಯವರೆಗೆ 24,961 ಮೇ.ಟನ್ ಪೂರೈಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 32,515 ಮೇ.ಟನ್ ವಿವಿಧ ರಸಗೊಬ್ಬರಗಳ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಶಹಾಪುರ ತಹಶೀಲ್ದಾರ್‌ ಮುಧರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೀಜ ಮಾರಾಟ ಮಳಿಗೆಗಳಿದ್ದು, ಕಳಪೆ ಬೀಜ ಮಾರಾಟ ಮಾಡುವ ಸಂಭವವಿದ್ದು, ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಳಪೆ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ರೈತರ ಕುಂದು ಕೊರತೆಗಳನ್ನು ಬಗೆಹರಿಸಲು ತಾಲ್ಲೂಕು ಮಟ್ಟದ ಸಭೆ ನಡೆಸಲು ಸಭೆಗೆ ತಿಳಿಸಿದರು.

ಈ ವೇಳೆ ಜಂಟಿ ಕೃಷಿ ನಿರ್ದೇಶಕ ಅಬಿದ್ ಎಸ್ ಎಸ್‌, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ್, ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಶೇಷಲು, ಕೃಷಿ ಇಲಾಖೆ ತಾಂತ್ರಿಕ ಸಲಹೆಗಾರ ರಾಜಕುಮಾರ, ಡಿಡಿಪಿಐ ಶಾಂತಗೌಡ ಪಾಟೀಲ, ಶಹಾಪುರ ತಹಶೀಲ್ದಾರ್‌ ಮಧುರಾಜ್, ಹುಣಸಗಿ ತಹಶೀಲ್ದಾರ್ ಅಶೋಕ ಸುರಪುರಕರ, ಬೆಳೆ ವಿಮೆಯ ಜಿಲ್ಲಾ ಸಂಯೋಜಕ ಬನಶಂಕರ, ತಾಲ್ಲೂಕು ಸಂಯೋಜಕ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.