ADVERTISEMENT

‘ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ’

ಚಿತ್ತಾಪುರ ರಸ್ತೆಯಲ್ಲಿ ಆಸ್ತಿ ತೆರಿಗೆ ನೂತನ ಕೌಂಟರ್ ಉದ್ಘಾಟಿಸಿದ ಮುದ್ನಾಳ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 9:16 IST
Last Updated 17 ಏಪ್ರಿಲ್ 2021, 9:16 IST
ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿರುವ ನಗರಸಭೆ ಮಳಿಗೆಯಲ್ಲಿ ಶುಕ್ರವಾರ ಆಸ್ತಿ ತೆರಿಗೆ ನೂತನ ಕೌಂಟರ್‌ ಉದ್ಘಾಟಿಸಿದ ಶಾಸಕ ವೆಂಕಟರೆಡ್ಡಿ ಮುದ್ನಾಳ
ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿರುವ ನಗರಸಭೆ ಮಳಿಗೆಯಲ್ಲಿ ಶುಕ್ರವಾರ ಆಸ್ತಿ ತೆರಿಗೆ ನೂತನ ಕೌಂಟರ್‌ ಉದ್ಘಾಟಿಸಿದ ಶಾಸಕ ವೆಂಕಟರೆಡ್ಡಿ ಮುದ್ನಾಳ   

ಯಾದಗಿರಿ: 2021–22ನೇ ಸಾಲಿನ ಆಸ್ತಿ ತೆರಿಗೆಯನ್ನು ನಗರಸಭೆಗೆ ಸಾರ್ವಜನಿಕರು ಏ.30ರ ಒಳಗಾಗಿ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸಾರ್ವಜನಿಕರು ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ನಗರದ ಚಿತ್ತಾಪುರ ರಸ್ತೆಯಲ್ಲಿರುವ ನಗರಸಭೆ ಮಳಿಗೆಯಲ್ಲಿ ಶುಕ್ರವಾರ ಹೊಸದಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ ನೂತನ ಕೌಂಟರ್ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ತೆರಿಗೆದಾರರಿಗೆ ಇದು ಒಂದು ಸಂತಸದ ಸಂಗತಿ. ಎಲ್ಲಾ ಸಾರ್ವಜನಿಕರು ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ ಮೂಲಕ ನಗರಸಭೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಇನ್ನು ಹೆಚ್ಚಾಗಿ ನಡೆಸಲು ಸಹಕರಿಸಬೇಕು ಎಂದರು.

ADVERTISEMENT

ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಮಾತನಾಡಿ, ಆಸ್ತಿ ತರಿಗೆದಾರರು ನಿಗದಿತ ಅವಧಿಯಲ್ಲಿ ಪಾವತಿಸಿ ರಿಯಾಯಿತಿ ಸೌಲಭ್ಯ ಪಡೆಯಲು ಹಾಗೂ ಆಸ್ತಿ ತೆರಿಗೆ ಬಾಕಿ, ನೀರಿನ ತೆರಿಗೆ ಬಾಕಿ, ಉದ್ಯಮಿ ಪರವಾನಗಿ ಶುಲ್ಕ, ಮಳಿಗೆ ಬಾಡಿಗೆ ಹಾಗೂ ಬಾಕಿ ಪಾವತಿಸುವುದರ ಮೂಲಕ ಮತ್ತು ಉದ್ದಿಮೆ ಪರವಾನಗಿಯನ್ನು ನವೀಕರಿಸುವ ಮೂಲಕ ನಗರದ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಮುಂಚೆ ನಗರಸಭೆಯಲ್ಲಿದ್ದ ತೆರಿಗೆ ಪಾವತಿ ಕೇಂದ್ರ ಮುಂಚೂಣಿಯಲಿದ್ದು, ಇತರರ ಅನುಕೂಲಕ್ಕಾಗಿ ಹೊಸದಾಗಿ ಚಿತ್ತಾಪುರ ರಸ್ತೆಯ ನಗರಸಭೆ ಸಂಕೀರ್ಣದಲ್ಲಿ ಆರಂಭಿಸಲಾಗಿದೆ. ಕಾರಣ ಎಲ್ಲ ಆಸ್ತಿ ತೆರಿಗೆದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಯುಡಾ ಅಧ್ಯಕ್ಷ ಬಸವರಾಜ ಚಂಡರಕಿ, ಯುಡಾ ಸದಸ್ಯ ಮಂಜುನಾಥ ಜಡಿ, ಚಂದ್ರಕಾಂತ ಮಡ್ಡಿ, ಕಂದಾಯ ಅಧಿಕಾರಿ ಅಲ್ಕೆಝಂಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.