ADVERTISEMENT

ಗ್ರಾಮ ವಾಸ್ತವ್ಯ| ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ‘ಪ್ಯಾಕೇಜ್‘ ಘೋಷಣೆ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:42 IST
Last Updated 20 ಜೂನ್ 2019, 19:42 IST
ಮುಖ್ಯಮಂತ್ರಿ ಕುಮಾರಸ್ವಾಮಿ ಚಂಡರಕಿಗೆ ಆಗಮಿಸುವ ಹಿನ್ನೆಲೆಯಲ್ಲಿ ಯಾನಾಗುಂದಿ ರಸ್ತೆ ಡಾಂಬರೀಕರಣ ನಡೆಯುತ್ತಿರುವುದು
ಮುಖ್ಯಮಂತ್ರಿ ಕುಮಾರಸ್ವಾಮಿ ಚಂಡರಕಿಗೆ ಆಗಮಿಸುವ ಹಿನ್ನೆಲೆಯಲ್ಲಿ ಯಾನಾಗುಂದಿ ರಸ್ತೆ ಡಾಂಬರೀಕರಣ ನಡೆಯುತ್ತಿರುವುದು   

ಯಾದಗಿರಿ: ಹೈದರಾಬಾದ್ ಕರ್ನಾಟಕದಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಂಥ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಮೊದಲ ಬಾರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಎಂದು ನಿರೀಕ್ಷೆ ಹುಟ್ಟಿಸಿದೆ.

ಜಿಲ್ಲೆಯಲ್ಲಿ ಕೃಷ್ಣೆ, ಭೀಮಾ ನದಿ ಹರಿಯುತ್ತಿದ್ದರೂ ನೀರಾವರಿ ಪ್ರದೇಶ ಹೆಚ್ಚಿಲ್ಲ. ಜಿಲ್ಲೆಯಿಂದ ವಿವಿಧ ಭಾಗಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಬಡತನ, ಅನಕ್ಷರತೆ, ಶೈಕ್ಷಣಿಕ ಬೆಳವಣಿಗೆಯಲ್ಲಿ ತೀರಾ ಹಿಂದುಳಿದಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿಯವರು ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ‘ಪ್ಯಾಕೇಜ್’ ಘೋಷಿಸುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ಬಡತನ ಅಪೌಷ್ಟಿಕತೆ, ಶಿಕ್ಷಣ ವ್ಯವಸ್ಥೆಯಲ್ಲಿ ಜಿಲ್ಲೆ ಯಾವಾಗಲೂ ಕೆಳಗಿನಿಂದ ಮೊದಲನೇ ಸ್ಥಾನ ಇರುತ್ತದೆ. ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಮಂಜೂರು ಆಗಿರುವ ಹುದ್ದೆಗಳಿಗಿಂತ ಅರ್ಧದಷ್ಟು ಖಾಲಿ ಇವೆ. ಜಿಲ್ಲೆಯಲ್ಲಿ ಕಾಯಂ ಅಧಿಕಾರಿಗಳು ಇಲ್ಲದೇ ವಿವಿಧ ಇಲಾಖೆಗಳ ಪ್ರಗತಿ ಕುಂಠಿತವಾಗಿದೆ. ಪ್ರಭಾರಿ ಅಧಿಕಾರಿಗಳೆ ಹೆಚ್ಚಿರುವುದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಈ ಜಿಲ್ಲೆಗೆ ವರ್ಗಾವಣೆಯಾಗಿ ಬರುವ ಅಧಿಕಾರಿಗಳು ‘ಶಿಕ್ಷೆ‘ ಎನ್ನುವ ರೀತಿಯಲ್ಲಿ ವಾತಾವರಣ ಸೃಷ್ಟಿಸಲಾಗಿದೆ. ಕೆಲವರಿಗೆ ಕೆಲಸ ಮಾಡುವ ಹುಮ್ಮಸಿದ್ದರೂ ‘ಇಲ್ಲೆ‘ ನೆಲೆ ನಿಂತವರು ಅಂಥವರನ್ನು ಎತ್ತಂಗಡಿ ಮಾಡಿಸುವ ಮೂಲಕ ಅಭಿವೃದ್ಧಿ ಶೂನ್ಯತೆಗೆ ಕಾರಣರಾಗುತ್ತಿದ್ದಾರೆ ಎನ್ನುವ ಆರೋಪವಿದೆ.

ಬಜೆಟ್‌ನಲ್ಲಿ ಘೋಷಿಸುವ ಅಂಶಗಳು ಇಲ್ಲಿ ಅನುಷ್ಠಾನಗೊಳ್ಳುವುದೇ ಕಡಿಮೆ. ಈ ಭಾಗದಲ್ಲಿ ಎಂಜಿನಿಯರ್, ವೈದ್ಯಕೀಯ ಕಾಲೇಜುಗಳ ಕೊರತೆ ಇದೆ. ಹೀಗಾಗಿ ಶಿಕ್ಷಣದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಎಲ್ಲ ಅಂಶಗಳ ನಿವಾರಣೆಗೆ ಪ್ಯಾಕೇಜ್ ಘೋಷಿಸಿದರೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎನ್ನುವುದು ಜಿಲ್ಲೆಯ ಪ್ರಜ್ಞಾವಂತರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.