ADVERTISEMENT

ದೋರನಹಳ್ಳಿ ಆತ್ಮಹತ್ಯೆ ಪ್ರಕರಣ: ನ್ಯಾಯ ಕೋರಿ ಕಾನೂನು ಸೇವಾ ಸಮಿತಿಯ ಮೊರೆ

ದೋರನಹಳ್ಳಿ: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:30 IST
Last Updated 6 ಜುಲೈ 2021, 3:30 IST

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಜೂನ್ 28ರಂದು ಒಂದೇ ಕುಟುಂಬದ ಆರು ಜನ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಮರ್ಪಕವಾಗಿ ನ್ಯಾಯಾಂಗ ಇಲಾಖೆ ತನಿಖೆಗೆ ಒಳಪಡಿಸಿ ಇಲ್ಲವೆ ಕಾನೂನು ಸೇವಾ ಸಮಿತಿಗೆ ಸಲ್ಲಿಸಿದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸಬೇಕು ಎಂದು ಕೋರಿ ರೈತ ಮುಖಂಡರು ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಾಧೀಶ ಭಾಮಿನಿ ಅವರಿಗೆ ಮನವಿ ಸಲ್ಲಿಸಿದರು.

ಬಡ ಕೃಷಿಕನಾಗಿದ್ದ ಮೃತ ಭೀಮರಾಯ ಸುರಪುರ ಉತ್ತಮ ಬೆಳೆ ಹಾಗೂ ಬೆಲೆ ಸಿಗದೆ ನೊಂದುಕೊಂಡಿದ್ದರು. ಕೃಷಿಗಾಗಿ ಕೈಸಾಲ ಮಾಡಿದ್ದರು. ಸಾಲವನ್ನು ತಿರುವಳಿ ಮಾಡಲು ವಿಫಲನಾಗಿದ್ದರು. ಸಾಲಬಾಧೆಯಿಂದ ನೊಂದುಕೊಂಡು ಇಡೀ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತಾಪಿ ವರ್ಗ ತೀವ್ರವಾಗಿ ನೊಂದುಕೊಂಡಿದೆ. ಘಟನೆ ನಡೆದು ಒಂದು ವಾರ ಕಳೆದರೂ ಸಮರ್ಪಕವಾಗಿ ವಿಚಾರಣೆ ನಡೆಯುತ್ತಿಲ್ಲ ಎಂಬ ಕೊರಗು ನೊಂದ ಕುಟುಂಬದವರಿಂದ ಕೇಳಿ ಬಂದಿದೆ. ಪ್ರಕರಣವು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣಿಸುತ್ತದೆ. ಆದರೆ, ಸಾವಿಗೆ ಕಾರಣ ಏನು ಎಂಬುವುದು ತಿಳಿದುಕೊಳ್ಳಬೇಕಾಗಿದೆ ಎಂದು ಪ್ರಾಧಿಕಾರಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ದಾಖಲಿಸಿದ್ದಾರೆ.

ಇಡಿ ಪ್ರಕರಣವನ್ನು ಸಮಗ್ರವಾಗಿ ತನಖೆ ನಡೆಸಲು ಸಂಬಂಧಪಟ್ಟ ಪೊಲೀಸ್‌ಇಲಾಖೆಗೆ ನಿರ್ದೇಶನ ನೀಡಬೇಕು. ಇಲ್ಲವೆ ಸ್ವತಂತ್ರವಾಗಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಕಾನೂನು ಸೇವಾ ಸಮಿತಿಗೆ ಸಲ್ಲಿಸಿದ ಮನವಿಯ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕು ಎಂದು ಸಮಸ್ತ ರೈತಾಪಿ ವರ್ಗದ ಪರವಾಗಿ ಮನವಿ ಮಾಡಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ, ಕರ್ನಾಟಕ ಕಿಸಾನ ಸಂಘದ ಸಂಚಾಲಕ ಭಾಸ್ಕರರಾವ ಮುಡಬೂಳ ಹಾಗೂ ಶಹಾಪುರ ರೈತ ಹಿತಾರಕ್ಷಣಾಸಮಿತಿ ಸಂಚಾಲಕ ಆರ್.ಚೆನ್ನಬಸ್ಸು ವನದುರ್ಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.