ADVERTISEMENT

ಸುರಪುರ: ‘ಕುಡಿಯುವ ನೀರಿನ ಯೋಜನೆ ಶೀಘ್ರ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 13:44 IST
Last Updated 20 ಜುಲೈ 2021, 13:44 IST
ಸುರಪುರ ತಾಲ್ಲೂಕಿನ ಕಂಪಾಪುರ ಹತ್ತಿರದ ಉದ್ದೇಶಿತ ನೀರು ಸರಬರಾಜು ಯೋಜನೆಯ ಸ್ಥಳಕ್ಕೆ ಸೋಮವಾರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಸಿ.ಇ.ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು
ಸುರಪುರ ತಾಲ್ಲೂಕಿನ ಕಂಪಾಪುರ ಹತ್ತಿರದ ಉದ್ದೇಶಿತ ನೀರು ಸರಬರಾಜು ಯೋಜನೆಯ ಸ್ಥಳಕ್ಕೆ ಸೋಮವಾರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಸಿ.ಇ.ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು   

ಸುರಪುರ: ‘ನಗರದ ಕುಡಿಯುವ ನೀರು ಸರಬರಾಜುಗೆ ಸಂಬಂಧಿಸಿದ ₹ 158 ಕೋಟಿ ವೆಚ್ಚದ ಯೋಜನೆಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಿ 13 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಲಾಗುವುದು’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಮುಖ್ಯ ಕಾರ್ಯನಿರ್ವಾಹಕ ಎಂಜನಿಯರ್ ಸಿ.ಎಂ. ನಾಗರಾಜ ತಿಳಿಸಿದರು.

ತಾಲ್ಲೂಕಿನ ಕಂಪಾಪುರ ಹತ್ತಿರದ ಕೃಷ್ಣಾ ನದಿಯ ಉದ್ದೇಶಿತ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಸ್ಥಳ ಪರಿಶೀಲಿಸಿ, ನೀಲ ನಕ್ಷೆ ರೂಪರೇಷೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

‘2055ರ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಈ ಸ್ಥಳದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು ಬೇಸಿಗೆ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸಂಪೂರ್ಣ ನೀರಿನ ಸೌಲಭ್ಯ ಸಿಗುವ ವಿಶ್ವಾಸವಿದೆ’ ಎಂದರು.

ADVERTISEMENT

‘ನಗರಕ್ಕೆ ಪ್ರತಿ ದಿನ 20 ದಶಲಕ್ಷ ಲೀಟರ್ ನೀರು ಸರಬರಾಜು ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕುಂಬಾರಪೇಟ ಹತ್ತಿರದ ಜಲಶುದ್ಧೀಕರಣ ಘಟಕದವರೆಗೆ ಪೈಪ್‍ಲೈನ್ ಅಳವಡಿಸಲಾಗುವುದು. ಮಾರ್ಗ ಮದ್ಯದ ದೇವಾಪುರ, ಕವಡಿಮಟ್ಟಿ, ಖಾನಾಪುರಗಳಿಗೆ ಕಚ್ಚಾ ನೀರು ಒದಗಿಸಲಾಗುವುದು’ ಎಂದರು.

‘ಹುಲಕಲ್ ಗುಡ್ಡದ ಹತ್ತಿರ 15 ದಶಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್, ತಹಶೀಲ್ದಾರ್ ಕಚೇರಿ, ದಖನಿ ಮೊಹಲ್ಲಾ, ಕಬಾಡಗೇರಾ, ರಂಗಂಪೇಟೆ, ಸತ್ಯಂಪೇಟೆ, ವೆಂಕಟಾಪುರ ಸೇರಿದಂತೆ ಒಟ್ಟ 7 ಕಡೆ ಓವರ್‌ಹೆಡ್‌ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮುಂದಿನ 50 ವರ್ಷ ನಗರಕ್ಕೆ ನೀರಿನ ಸಮಸ್ಯೆ ಆಗುವುದಿಲ್ಲ. ಕಂಪಾಪುರದಿಂದ ಪ್ರತಿ ವಾರ್ಡ್ ಸೇರಿ 150 ಕಿಮೀ., ಪೈಪ್‍ಲೈನ್ ಮಾಡಲಾಗುತ್ತಿದೆ. ಯಂತ್ರಚಾಲಿತ ಸ್ಕಾಡಾ ವಾಲ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಇದನ್ನು ಕಂಪ್ಯೂಟರ್ ಮೂಲಕ ನಿರ್ವಹಣೆ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ವಿವರಿಸಿದರು.

ನಿಗಮದ ಎಇಇ ಎಚ್.ಎಂ. ಪ್ರಭಣ್ಣ, ಎಇಗಳಾದ ಶಂಕರಗೌಡ ಪಾಟೀಲ, ದೇವರಾಜ ಕುರುಕುಂದಿ, ಶಿವುಕುಮಾರ ಇದ್ದರು.

***
ನಗರದ ಜನತೆಗೆ ನಿರಂತರ ನೀರು ಒದಗಿಸುವ ಭರವಸೆ ನೀಡಿದ್ದೆ. ಅದು ಈಗ ಈಡೇರುತ್ತಿರುವುದು ಸಂತಸ ತಂದಿದೆ. ಈಗಾಗಲೆ ಟೆಂಡರ್ ಮುಗಿದಿದ್ದು ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು 15 ತಿಂಗಳಲ್ಲಿ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.
-ರಾಜೂಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.