
ಶಹಾಪುರ: ‘ನಮ್ಮ ಸಂವಿಧಾನದಲ್ಲಿ ಶೈಕ್ಷಣಿಕ ಅವಕಾಶ ಹಾಗೂ ಸೌಲಭ್ಯ ನೀಡಿದ್ದರಿಂದ ನಾನು ಕಿರಿಯ ಎಂಜಿನಿಯರಾಗಿ ನೇಮಕಗೊಂಡು ಮುಖ್ಯ ಎಂಜಿನಿಯರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಯಿತು. ವ್ಯಕ್ತಿಗೆ ಶಿಕ್ಷಣವೇ ಬದುಕಿನ ಆಸೆರಯಾಗಿದೆ ಎಂಬುವುದು ಯಾರು ಮರೆಯಬಾರದು’ ಎಂದು ನಿವೃತ್ತ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ಅವರು ತಿಳಿಸಿದರು.
ತಾಲ್ಲೂಕಿನ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರಾಗಿ ಸೇವಾ ನಿವೃತ್ತಿ ಹೊಂದಿದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಬಡತನದ ಪರಿಸ್ಥಿತಿಯಲ್ಲಿ ಅಧ್ಯಯನ ಮಾಡಿ, ಶಿಕ್ಷಣದಿಂದ ಮಾತ್ರ ಉಜ್ವಲ ಭವಿಷ್ಯ ಕಂಡುಕೊಳ್ಳಲು ಹಾಗೂ ಉನ್ನತ ಸ್ಥಾನಮಾನ ಹೊಂದಲು ಸಾಧ್ಯವಿದೆ. ಎಂಜಿನಿಯರ್ ಹುದ್ದೆ ತುಂಬಾ ಶ್ರೇಷ್ಠವಾದುದ್ದು ಮಾನವ ಸಮುದಾಯಕ್ಕೆ ಅನ್ನ ನೀಡುವ ರೈತರೊಂದಿಗೆ ಉತ್ತಮ ಬಾಂದವ್ಯ ಹೊಂದಲು ಸಾಧ್ಯವಾಯಿತು’ ಎಂದರು.
ಕೃಷ್ಣಾ ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ ಮಾತನಾಡಿ, ‘ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ಅವರ ಬದುಕು ಮತ್ತು ಸಾಧನೆ ನಾಡಿಗೆ ಮಾದರಿಯಾಗಿದೆ. ಎಂಜಿನಿಯರ್ ಕ್ಷೇತ್ರಕ್ಕೆ ಅವರ ಜ್ಞಾನ, ಪ್ರತಿಭೆ, ಅನುಭವ ಬಹಳಷ್ಟು ಉಪಯುಕ್ತವಾಗಿತ್ತು. ನಾವಿಬ್ಬರೂ ಬೀದರ ಜಿಲ್ಲೆಯವರು ಎಂಬುದು ತುಂಬಾ ಹೆಮ್ಮೆಯ ಸಂಗತಿ’ ಎಂದರು.
ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು, ನಿವೃತ್ತ ಹಿರಿಯ ಅಧಿಕಾರಿಗಳಾದ ಜಿ.ಜಿ. ಪವಾರ್, ಎಚ್. ರವಿಶಂಕರ್, ಲಕ್ಷ್ಮಣ ಎಮ್. ನಾಯಕ್, ಬಿ.ಬಿ ರಾಂಪುರೆ, ಪ್ರದೀಪ, ಮಿತ್ರ ಮಂಜುನಾಥ, ತಿಪ್ಪಣ್ಣಗೌಡ ಎಸ್ ಅನ್ನದಾನಿ, ಪ್ರಭಾರ ಮುಖ್ಯ ಎಂಜಿನಿಯರ್ ಜಿ.ಎನ್. ಅನಿಲರಾಜ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಮರೇಶಗೌಡ ದರ್ಶನಾಪುರ, ಎಂಜಿನಿಯರ್ ಹುಸನಪ್ಪ ಕಟ್ಟಿಮನಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.