ಸುರಪುರ: ‘ದೇಶದ ಇತಿಹಾಸದಲ್ಲೇ ಸುರಪುರ ಸಂಸ್ಥಾನಕ್ಕೆ ವಿಶೇಷ ಸ್ಥಾನ ಇದೆ. ರಾಜಾ ನಾಲ್ವಡಿ ವೆಂಕಟಪ್ಪನಯಕ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿ ಅಜರಾಮರರಾಗಿದ್ದಾರೆ’ ಎಂದು ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಹೇಳಿದರು.
ಸುರಪುರ ಸಂಸ್ಥಾನದ ಬಗ್ಗೆ ಅರಮನೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಸಚಿವ ರಾಜಾಮದನಗೋಪಾಲ ನಾಯಕ ಮಾತನಾಡಿ, ‘ಕಿತ್ತೂರು ರಾಣಿ ಚನ್ನಮ್ಮ, ಚಿತ್ರದುರ್ಗದ ಒನಕೆ ಓಬವ್ವ, ಮದಕರಿ ನಾಯಕ ಸೇರಿದಂತೆ ಇತರೆ ರಾಜಮನೆತನದವರ ಇತಿಹಾಸ ಪಠ್ಯವಾಗಿದೆ. ಸುರಪುರ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಹೋರಾಟದ ಬಗ್ಗೆ ಉಲ್ಲೇಖವಿಲ್ಲ’ ಎಂದು ವಿಷಾದಿಸಿದರು.
‘ಈ ಭಾಗದ ಜನ ಪ್ರತಿನಿಧಿಗಳು ಹೋರಾಟ ಮಾಡಿ ಇಲ್ಲಿನ ಇತಿಹಾಸವನ್ನು ಪಠ್ಯದಲ್ಲಿ ತರುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದರಿಂದ ಅರಸರ ಕಾಲ, ಅವರ ಆಳ್ವಿಕೆ, ಪರಿಚಯ, ಸಂಸ್ಥಾನದ ಹಲವಾರು ಅರಸರ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಸರ್ವೋದಯ ಪ್ರೌಢ ಶಾಲೆ- ಗರುಡಾದ್ರಿ ಚಿತ್ರಕಲೆ ಮತ್ತು ಮುಮ್ಮಡಿ ರಾಜಾ ದೇವೇಂದ್ರ ವೆಂಕಟಪ್ಪ ನಾಯಕ 1818-1827 ರ ಇತಿಹಾಸ, ವಿನಾಯಕ ಪ್ರೌಢಶಾಲೆ- ಸುರಪುರ ಇತಿಹಾಸ, ವಿದ್ಯಾನಿಕೇತನ ಶಾಲೆ– ಟೇಲರ್ನ ಜೀವನ ಚರಿತ್ರೆಮತ್ತು ಸಾಧನೆಗಳು, ಗಾಯತ್ರಿ ಶಾಲೆ-ಕ್ರಾಂತಿವೀರ ನಾಲ್ವಡಿ ರಾಜಾವೆಂಕಟಪ್ಪ ನಾಯಕರ ಜೀವನ ಮತ್ತು ಸಾಧನೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಶಾಲೆ- ರಾಜಾ ಪಾಮನಾಯಕ ಜೀವನ ಸಾಧನೆ ಆಡಳಿತದ ಇತಿಹಾಸ, ರಾಣಿ ಜಾನಕಿ ದೇವಿ ಶಾಲೆ- ಮೊಂಡುಗೈ ವೆಂಕಪ್ಪನಾಯಕ ಜೀವನ ಮತ್ತು ಸಾಧನೆ, ಜ್ಞಾನೋದಯ ಶಾಲೆ- ಸುರಪುರ ಸಂಸ್ಥಾನದ ಕೊಡುಗೆ ಹಾಗೂ ಕೊಹಿನೂರು ವಜ್ರ, ಸಂಸ್ಥಾನದ ವಿಜಯೋತ್ಸವ, ಸರ್ಕಾರಿ ಪ್ರೌಢಶಾಲೆ- ರಾಜಾ ಪಿತಾಂಬರಿ ಪಿಡ್ಡನಾಯಕನ ಜೀವನ ಸಾಧನೆ– ಹೀಗೆ ವಿವಿಧ ಪ್ರೌಢ ಶಾಲೆಗಳಿಗೆ ಸಂಸ್ಥಾನ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಸಂಸ್ಥಾನದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಅರಸು ಮನೆತನದವರು, ಸಂಬಂಧಿಕರು, ಪ್ರಮುಖರು, ಮುಖಂಡರು, ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.