ಯಾದಗಿರಿ: ಸುರಪುರ ತಾಲ್ಲೂಕಿನ ಕವಡಿಮಟ್ಟಿಯಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ರೈತ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಮುಖ್ಯಸ್ಥ ಡಾ.ಅಮರೇಶ ವೈ. ಎಸ್., ಮಾತನಾಡಿ, ಭಾರತದ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಶೇ 80ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಎಂದು ಅಧ್ಯಯನವು ತೋರಿಸುತ್ತದೆ. ಇಡೀ ಕೃಷಿ ಸಮುದಾಯದಲ್ಲಿ ಶೇ 30ಕ್ಕಿಂತ ಹೆಚ್ಚು ಮಹಿಳೆಯರು ಸ್ವತಃ ಕೃಷಿಕರು ಮತ್ತು ಶೇ 45ಕ್ಕಿಂತ ಹೆಚ್ಚು ಜನರು ಕೃಷಿ ಕಾರ್ಮಿಕರಾಗಿದ್ದಾರೆ ಎಂದರು.
ರೈತ ಮಹಿಳೆಯರು ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದು, ದೇಶದ ಪ್ರಗತಿಗೆ ಸಹಕಾರಿಯಾಗಿದೆ. ಈ ಕೋವಿಡ್-19 ಸಮಯದಲ್ಲಿ ದೇಶದ ಎಲ್ಲಾ ರಂಗಗಳು ನಷ್ಟದಲ್ಲಿವೆ. ಆದರೆ, ಕೃಷಿ ರಂಗ ಮಾತ್ರ ಪ್ರಗತಿಯಲ್ಲಿದೆ. ಅದಕ್ಕೆ ಕಾರಣಿಕರ್ತರಾದ ರೈತರನ್ನು ಮತ್ತು ರೈತ ಮಹಿಳೆಯರನ್ನು ಶ್ಲಾಘಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ.ಸತೀಶಕುಮಾರ ಕಾಳೆ ಮಾತನಾಡಿ, ರೈತ ಮಹಿಳೆಯರು ದಿನದಲ್ಲಿ 14-15 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಾರೆ. ಮಹಿಳೆಯರ ಕೊಡುಗೆ ನಮ್ಮ ಕೃಷಿಯಲ್ಲಿ ಬಹಳ ಮಹತ್ವ ಪಡೆದಿದೆ ಎಂದರು.
ವಿಜ್ಞಾನಿಗಳಾದ ಡಾ. ಉಮೇಶ ಬಾರಿಕಾರ ತಡಿಬಿಡಿ ಗ್ರಾಮದಲ್ಲಿ ಮತ್ತು ಡಾ. ಕೊಟ್ರೇಶ ಪ್ರಸಾದ ಅವರು ಲಿಂಗದಳ್ಳಿ ಗ್ರಾಮದಲ್ಲಿ ಕೃಷಿ ಮಹಿಳಾ ದಿನಾಚರಣೆ ಆಚರಿಸಿದರು.
ಕವಡಿಮಟ್ಟಿ ಗ್ರಾಮದ ಸುಮಾರು 30 ರೈತ ಮಹಿಳೆಯರು ಭಾಗವಹಿಸಿದ್ದರು. ಸ್ತ್ರೀಶಕ್ತಿ ಸಂಘದ ಕೆಂಚಮ್ಮ, ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ಹುಲಗಮ್ಮ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಲಕ್ಷ್ಮಿ ಯಂಕಣ್ಣ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಶ್ರೀದೇವಿ, ಮಲ್ಲಿಕಾರ್ಜುನಯ್ಯ ಹೊರಗಿನಮಠ, ಅಮಾತ್ಯಪ್ಪ, ಪರುಶುರಾಮ ಕೋನಾಳ, ಹಣಮಂತ ಯಾದವ, ದೇವಿಂದ್ರಪ್ಪ ಪೂಜಾರಿ ಮತ್ತು ಶಾರುಖಾನ ನಾಡಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.