ಯಾದಗಿರಿ: ಸಿಎಎ ಮತ್ತು ಎನ್.ಆರ್.ಸಿ. ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಸದರ್ ದರವಾಜಾ ವತಿಯಿಂದ ಒಂದು ದಿನದ ರೋಜಾ (ಉಪವಾಸ) ಮಾಡುವ ಮೂಲಕ ವಿನೂತನವಾಗಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಸದರ್ ದರವಾಜಾ ಮಸೀದಿಯಲ್ಲಿ ಭಾನುವಾರ ಒಂದು ದಿನ ರಂಜಾನ್ ಮಾದರಿಯಲ್ಲಿ ಬೆಳಗ್ಗಿನಿಂದಲೇ ಸಾಮೂಹಿಕ ಉಪವಾಸ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ. ದೇಶದಲ್ಲಿ ಏಕತೆ ಮೂಡಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇಶದಲ್ಲಿ ಎಂದಿನಂತೆ ಒಂದಾಗಿ ಬಾಳುವಂತೆ ಅಲ್ಲಾಹು ಕರುಣಿಸಲಿ. ಎಲ್ಲರೊಂದಿಗೆ ಎಲ್ಲರೂ ಕಲೆತು ಬೆರೆತು ಜೀವನ ನಡೆಸುವಂತೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಸಂಜೆ ಉಪವಾಸ ಬಿಟ್ಟು ಇಫ್ತಿಯಾರ್ ಕೂಟದಲ್ಲಿ ಫಲಾಹಾರ ಸೇವನೆ ಮಾಡಲಾಯಿತು.
ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಜಿಲಾನಿ ಆಫಘಾನ್, ಭಾರತ ಬೀಡಿ ಮಾಲೀಕರಾದ ಖಾಜಾ ಮೈನೋದ್ದಿನ್, ಮಸೀದಿ ಕಮಿಟಿ ಅಧ್ಯಕ್ಷ ಅಯುಬ್ ದರ್ಜಿ, ನಗರಸಭೆ ಸದಸ್ಯ ಮನ್ಸೂರ್ ಅಹಮ್ಮದ್ ಆಫಗಾನ್, ನಗರಸಭೆ ಮಾಜಿ ಸದಸ್ಯ ಇನಾಯತ್ ಉರ್ ರಹೆಮಾನ್, ಬೈತುಲಾ ಮಾಲ್ ಉಪಾಧ್ಯಕ್ಷ ವಾಹಿದ ಮಿಯಾ, ಕಾರ್ಯದರ್ಶಿ ಸಮದಾನಿ ಮೂಸಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.