ADVERTISEMENT

ಯಾದಗಿರಿ | ಗೊಬ್ಬರ ವಿತರಣೆಯಲ್ಲಿ ಖಾಕಿ ಕಣ್ಗಾವಲು

ಬೆಳಿಗ್ಗೆಯಿಂದಲೇ ಗೊಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ರೈತರು

ಮಲ್ಲಿಕಾರ್ಜುನ ನಾಲವಾರ
Published 5 ಆಗಸ್ಟ್ 2025, 7:09 IST
Last Updated 5 ಆಗಸ್ಟ್ 2025, 7:09 IST
<div class="paragraphs"><p>ಯಾದಗಿರಿ ಜಿಲ್ಲೆಯ ರಸಗೊಬ್ಬರ ಅಂಗಡಿಯೊಂದರ ಬಳಿ ರೈತರನ್ನು ಸಾಲುಗಟ್ಟಿ ನಿಲ್ಲಿಸಿದ ಪೊಲೀಸರು</p></div>

ಯಾದಗಿರಿ ಜಿಲ್ಲೆಯ ರಸಗೊಬ್ಬರ ಅಂಗಡಿಯೊಂದರ ಬಳಿ ರೈತರನ್ನು ಸಾಲುಗಟ್ಟಿ ನಿಲ್ಲಿಸಿದ ಪೊಲೀಸರು

   

ಯಾದಗಿರಿ: ರಾಜ್ಯದಲ್ಲಿಯೇ ಅತಿಹೆಚ್ಚು ಯೂರಿಯಾ ಬಳಕೆ ಮಾಡುವ ಜಿಲ್ಲೆಗಳ ಪೈಕಿ ಯಾದಗಿರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಕಣ್ಗಾವಲಿನಲ್ಲಿ ರಸಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ.‌

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 4.16 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇರಿಸಿಕೊಂಡಿದ್ದು, ಅದರಲ್ಲಿ 1.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ನಾಟಿಯಾಗಿರುವ ಭತ್ತಕ್ಕೆ ಯೂರಿಯಾ ನೀಡಲು ರೈತರು ಗೊಬ್ಬರ ಅಂಗಡಿಗಳ ಮುಂದೆ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ADVERTISEMENT

ಬೇರೆ ಜಿಲ್ಲೆಗಳಿಂದಲೂ ಬಫರ್ ಸ್ಟಾಕ್ ಗೊಬ್ಬರವನ್ನು ತಂದು ಕೃಷಿಕರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕೃಷಿ ಅಧಿಕಾರಿಗಳು ನಿರತವಾಗಿದ್ದಾರೆ. ಮತ್ತೊಂದು ಕಡೆ ಅಹಿತಕರ ಅವಘಡಗಳ ತಡೆಗಾಗಿ ಖಾಕಿ ಪಡೆಯ ಮೊರೆಯೂ ಹೋಗಿದ್ದಾರೆ. 

ಶಹಾಪುರ, ಸುರಪುರ, ಕೆಂಭಾವಿ, ಹುಣಸಗಿ ವ್ಯಾಪ್ತಿಯ ರಸಗೊಬ್ಬರ ಅಂಗಡಿಗಳ ಮುಂದೆ ಪಿಎಸ್‌ಐ, ಕಾನ್‌ಸ್ಟೆಬಲ್‌ಗಳು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ರೈತರನ್ನು ಸಾಲಾಗಿ ನಿಲ್ಲಿಸಿ ನೂಕುನುಗ್ಗಲು, ತಳ್ಳಾಟ, ಗಲಾಟೆಗಳಿಗೆ ಅವಕಾಶ ಮಾಡಿಕೊಡದೆ ಗೊಬ್ಬರ ವಿತರಣೆಗಾಗಿ ಕೃಷಿ ಇಲಾಖೆಗೆ ಸಹಕರಿಸುತ್ತಿದ್ದಾರೆ. 

‘ಅಭಾವ ಸೃಷ್ಟಿಯಾಗುವ ಭೀತಿಯಿಂದ ಕೆಲವು ರಸಗೊಬ್ಬರ ಅಂಗಡಿಗಳ ಮುಂದೆ ನೂರಾರು ರೈತರು ಬೆಳಿಗ್ಗೆಯೇ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಗಂಟೆಗಟ್ಟಲೇ ನಿಲ್ಲಲು ಆಗದವರು ಬೇರೆಯವರನ್ನು ಕೂರಿಸಿ, ತಮ್ಮ ಪಾಳಿ ಬಂದಾಗ ಗೊಬ್ಬರು ಪಡೆದು ಹೋಗುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿಗಳು.

‘ಯಥೇಚ್ಛ ಗೊಬ್ಬರವನ್ನು ಬಳಸಿದ್ದರಿಂದಾಗಿ ಮಣ್ಣಿನಲ್ಲಿನ ನೈಟ್ರೋಜನ್ ಪ್ರಮಾಣ ಬಹಳ ಕಡಿಮೆಯಾಗಿದೆ. ಗೊಬ್ಬರ ಹಾಕದೆ ಬೆಳೆಯನ್ನು ಬೆಳೆಯದ ಮಟ್ಟಕ್ಕೆ ಮಣ್ಣಿನ ಪರಿಸ್ಥಿತಿಯನ್ನು ತಂದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗೊಬ್ಬರ ಸಿಗದೆ ಇರಬಹುದು ಎಂಬ ತಪ್ಪು ತಿಳಿವಳಿಕೆಯಿಂದ ಮುಂದಿನ ಅವಧಿಯ ಕೊಡಬೇಕಾದ ಗೊಬ್ಬರವನ್ನೂ ಈಗಲೇ ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ. ಇದು ಕೂಡ ಮುಗಿ ಬಿದ್ದು ಗೊಬ್ಬರ ಖರೀದಿಗೆ ಕಾರಣವಾಗಿದೆ’ ಎನ್ನುತ್ತಾರೆ ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಲಿಪಾಟೀಲ.

‘ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರವಹಿಸಲಾಗಿದೆ. ಗೊಬ್ಬರ ತಯಾರಕಾ ಕಂಪನಿಯವರಿಗೆ ದಾಸ್ತಾನ ಇಲ್ಲದೆ ಕಡೆ ಕಳುಹಿಸಿ, ಅದರ ಬಗ್ಗೆ ಮಾಹಿತಿ ಕೊಡುವಂತೆಯೂ ಸೂಚಿಸಲಾಗಿದೆ. ಯಾವ ಕಡೆಗೆ ಎಷ್ಟು ಪ್ರಮಾಣದಲ್ಲಿ ಯೂರಿಯಾ, ಡಿಎಪಿ ಸಾಗಾಟ ಆಗುತ್ತಿದೆ ಎಂಬುದರ ನಿಖರವಾದ ಮಾಹಿತಿಯನ್ನು ನಿರಂತರವಾಗಿ ಪಡೆಯಲಾಗುತ್ತಿದೆ. ವಿತರಣೆಯ ವೇಳೆ ಗಲಾಟೆ ಆಗದಂತೆ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗಿದೆ. ಪಿಎಸ್‌ಐ, ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಸಹ ಭದ್ರತೆಯ ಮೇಲೆ ನಿಗ ಇರಿಸಿದ್ದಾರೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

‘59 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ’:

‘ಯಾದಗಿರಿ ಜಿಲ್ಲೆಯಲ್ಲಿ 59 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದೆ. ಈಗಾಗಲೇ 31 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬಂದಿದ್ದು, ಇನ್ನೂ 600 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಬರುತ್ತಿದೆ. ನೆರೆಯ ಜಿಲ್ಲೆಗಳಿಂದಲೂ ಬಫರ್ ಸ್ಟಾಕ್ ಅಡಿ ತರೆಸಿಕೊಳ್ಳಲಾಗುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಜುಲೈನಲ್ಲಿ 5 ಸಾವಿರ ಮೆಟ್ರಿಕ್ ಟನ್ ಹಾಗೂ ಆಗಸ್ಟ್‌ನಲ್ಲಿ 15 ಸಾವಿರ ಮೆಟ್ರಿಕ್ ಟನ್‌ ಯೂರಿಯಾಗೆ ಬೇಡಿಕೆ ಇರುತ್ತದೆ. ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಭತ್ತ ನಾಟಿಯಾಗಿದ್ದರಿಂದ ಆಗಸ್ಟ್‌ನಲ್ಲಿ ಬರಬೇಕಿದ್ದ 15 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯು ಜುಲೈ ತಿಂಗಳಲ್ಲಿಯೇ ಎದುರಾಯಿತು. ಇಲಾಖೆಯ ಮೇಲಧಿಕಾರಿಗಳಿಗೆ ಜಿಲ್ಲೆಯಲ್ಲಿನ ಯೂರಿಯಾ ಬೇಡಿಕೆಯನ್ನು ಮನದಟ್ಟು ಮಾಡಿ, ಪ್ರಸ್ತುತ ಇರುವ 34 ಸಾವಿರ ಮೆಟ್ರಿಕ್ ಯೂರಿಯಾ ಬೇಡಿಕೆಯಲ್ಲಿ 31 ಸಾವಿರ ಮೆಟ್ರಿಕ್ ಟನ್ ಪಡೆಯಲಾಗಿದೆ’ ಎಂದರು.

‘ಜಿಲ್ಲೆಗೆ ಬಂದಿರುವ ಯೂರಿಯಾವನ್ನು ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೊಲೀಸರ ನೆರವು ಪಡೆಯಲಾಗಿದೆ. ರೈತರಿಗೆ ತೊಂದರೆ ಆಗದಂತೆ ಗೊಬ್ಬರ ವಿತರಣೆಯೂ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.