ADVERTISEMENT

ಯಾದಗಿರಿ: ಕೃಷ್ಣಾ ನದಿಯಿಂದ ಮತ್ತೆ ಪ್ರವಾಹದ ಆತಂಕ

ನದಿ ದಂಡೆಯ ರೈತರಿಗೆ ಸಂಕಷ್ಟ, ಬೆಳೆ ಮುಳುಗುವ ಭೀತಿ

ಬಿ.ಜಿ.ಪ್ರವೀಣಕುಮಾರ
Published 7 ಆಗಸ್ಟ್ 2020, 19:31 IST
Last Updated 7 ಆಗಸ್ಟ್ 2020, 19:31 IST
ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಸೇತುವೆ ಮುಳುಗುವಂತಿದೆ
ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಸೇತುವೆ ಮುಳುಗುವಂತಿದೆ   

ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಗುರುವಾರ ರಾತ್ರಿಯಿಂದಲೇ ಕೃಷ್ಣಾ ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ.ಶುಕ್ರವಾರ ಬೆಳಿಗ್ಗೆ 1.82 ಲಕ್ಷ ಕ್ಯುಸೆಕ್‌ ನೀರು ಹರಿಸುತ್ತಿರುವುದರಿಂದ ಮತ್ತೆ ಪ್ರವಾಹದ ಆತಂಕ ಮನೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದರಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದರೆ ನದಿಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಾಗಲಿದೆ.ಇದರಿಂದ ನದಿ ಪಾತ್ರದ ಹಳ್ಳಿಗಳಿಗೆ ನೀರು ನುಗ್ಗುವ ಆತಂಕ ಇದೆ.ನದಿಯಲ್ಲಿ ಪ್ರವಾಹದ ಏರು ಮುಖವಾಗುತ್ತಿರುವುದು ಆಂತಕ ಹೆಚ್ಚಿಸುತ್ತಲಿದೆ.

ಭತ್ತ, ಹತ್ತಿ ಬೆಳೆ: ಕೃಷ್ಣಾ ನದಿ ಪಾತ್ರದಲ್ಲಿ ಈಗ ಭತ್ತ, ಹತ್ತಿ ಬಿತ್ತನೆ ಮಾಡಿದ್ದಾರೆ. ನದಿ ಪ್ರವಾಹವೂ ಹೆಚ್ಚಾದರೆ ದಡದಲ್ಲಿರುವ ಬೆಳೆಗೆ ನೀರು ನುಗ್ಗುವ ಆತಂಕ ರೈತರಲ್ಲಿ ಶುರುವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಪ್ರವಾಹ ಬಂದಿತ್ತು. ಆಗಲೂ ಬೆಳೆಗಳಿಗೆ ನೀರು ನುಗ್ಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಬಂದಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳು ಸಸಿಗಳಾಗಿವೆ. ಒಂದು ಬಾರಿ ಗೊಬ್ಬರ ಕೂಡ ಹಾಕಿದ್ದಾರೆ. ಆದರೆ, ಹೆಚ್ಚಿನ ನೀರು ಬಂದರೆ ಹೇಗೆ ಎನ್ನುವುದು ರೈತರ
ಆತಂಕವಾಗಿದೆ.

ADVERTISEMENT

ಕೊಳ್ಳೂರು ಸೇತುವೆ ಮೇಲೆ ಬಸ್‌ ಬಂದ್: ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಸೇತುವೆ ಮೇಲೆ ಮುನ್ನಚ್ಚರಿಕೆ ಕ್ರಮವಾಗಿ ಬಸ್‌ ಸಂಚಾರವನ್ನು ಕಡಿತಗೊಳಿಸಲಾಗಿದೆ. ಇಬ್ಬರು ಪೊಲೀಸರನ್ನು ಇಲ್ಲಿ ನಿಯೋಜಿಸಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಖಾಸಗಿ ವಾಹನಗಳು ಮಾತ್ರ ಸಂಚಾರ ಮಾಡುತ್ತಿವೆ ಎಂದು ಗ್ರಾಮಸ್ಥ ಶಿವಾರೆಡ್ಡಿ ಪಾಟೀಲ ತಿಳಿಸಿದ್ದಾರೆ.

ನೀರಿನ ಹರಿವಿನ ಏರಿಳಿತ: ಶುಕ್ರವಾರ ಬೆಳಿಗ್ಗೆ 6 ಗಂಟೆಗೆ1.80ಲಕ್ಷ ಕ್ಯುಸೆಕ್ ಒಳ ಹರಿವಿದ್ದರೆ1.82ಲಕ್ಷ ಕ್ಯುಸೆಕ್ ಹೊರ ಹರಿವು ಇತ್ತು. ನಂತರ ಮಧ್ಯಾಹ್ನ 12 ಗಂಟೆಗೆ 1.60ಲಕ್ಷ ಕ್ಯುಸೆಕ್ ಒಳ ಹರಿವು, 1.80 ಲಕ್ಷ ಕ್ಯುಸೆಕ್ ಹೊರ ಹರಿವುಇತ್ತು. ಸಂಜೆ ಮತ್ತೆ 1.80 ಲಕ್ಷ ಕ್ಯುಸೆಕ್‌ಗೆ ತಲುಪಿತು.26.66 ಟಿಎಂಸಿ ಕಾಯ್ದುಕೊಂಡು ನೀರು ಹೊರ ಬಿಡಲಾಗುತ್ತಿದೆ.

***

ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಿದ್ಧವಾಗಿದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ

-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

***

ಪ್ರವಾಹ ಪೀಡಿತ ಗ್ರಾಮ, ಪರಿಹಾರ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ

-ಶಂಕರಗೌಡ ಸೋಮನಾಳ,ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.