ಯಾದಗಿರಿ: ‘ನಗರದ ಆಶ್ರಯ ಲೇಔಟ್ನಲ್ಲಿನ ಅಕ್ರಮ ಒತ್ತುವರಿ ತೆರವಿಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಭರವಸೆ ನೀಡಿದರು.
ನಗರದ ಪಿಲ್ಟರ್ ಬೆಡ್ ಹಿಂದಿನ ಆಶ್ರಯ ಲೇಔಟ್ನಲ್ಲಿ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎನ್ನುವ ದೂರಿನ ಹಿನ್ನಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ನಗರಸಭೆ ಸದಸ್ಯರು ಹಾಗೂ ಪೌರಾಯುಕ್ತ ಮತ್ತು ಸಿಬ್ಬಂದಿ ತಂಡದೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಬಡಾವಣೆಯಲ್ಲಿ ವಿದ್ಯುತ್ ಪೂರೈಕೆಗೆ ಹಾಕಲಾದ ಹೈಟೆನ್ಶನ್ ತಂತಿ ಕೆಳಗೆ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ಕಂಡುಬಂದಿದೆ. ಈ ರೀತಿಯ ಅಪಾಯದ ಸ್ಥಳದಲ್ಲಿ ಮನೆ ನಿರ್ಮಿಸಿರುವುದರಿಂದ ಏನಾದರೂ ಅನಾಹುತ ನಡೆದರೆ ಯಾರು ಹೊಣೆ? ಕೂಡಲೇ ಜೆಸ್ಕಾಂ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಪತ್ರಬರೆಯಿರಿ ಎಂದು ಪೌರಾಯುಕ್ತ ಉಮೇಶ ಚವಾಣ್ ಅವರಿಗೆ ಸೂಚಿಸಿದರು.
ಆಶ್ರಯ ಲೇಔಟ್ನಲ್ಲಿ ಯಾರೂ ಒತ್ತುವರಿ ಮಾಡುವಂತಿಲ್ಲ. ಒತ್ತುವರಿ ಅಥವಾ ಅಕ್ರಮ ಮನೆ ನಿರ್ಮಿಸಿಕೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ವಿದ್ಯುತ್ ತಂತಿಗಳ ಕೆಳಗೆ ಮನೆ ನಿರ್ಮಿಸಿಕೊಂಡವರ ವಿರುದ್ದ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ, ಸದಸ್ಯರಾದ ವಿಜಯಲಕ್ಷ್ಮೀ, ಮಂಜುನಾಥ ದಾಸನಕೇರಿ, ಅಂಬಯ್ಯ ಶಾಬಾದಿ, ಚನ್ನಕೇಶಗೌಡ ಬಾಣತಿಹಾಳ, ಮಶೆಪ್ಪ ನಾಯಕ, ಹಣಮಂತ ನಾಯಕ, ಹಣಮಂತ ಇಟಗಿ, ವಾಹಬ್, ಇಸ್ಮಾಯಿಲ್ ಖಾನ್, ವೆಂಕಟರಡ್ಡಿ ಹೊನಕೇರಿ, ಮನ್ಸೂರ್ ಅಹ್ಮದ್, ಗಣೇಶ ದುಪ್ಪಲ್ಲಿ, ಖಲೀಂ, ಚಂದ್ರಕಾಂತ ಮಡ್ಡಿ, ನಗರಸಭೆ ಎಇಇ ರಜನಿಕಾಂತ ಶೃಂಗೇರಿ, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಅಂಬಿಕೇಶ್ವರ, ಮಲ್ಲಿಕಾರ್ಜುನ ಕುರಕುಂಬಳ ಉಪಸ್ಥಿತರಿದ್ದರು.
ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದು. ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಗುವುದು.– ಲಲಿತಾ ಅನಪೂರ, ನಗರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.