ವಡಗೇರಾ: ತಾಲ್ಲೂಕಿನ ಗೊಂದೇನೂರ ಗ್ರಾಮದಲ್ಲಿ ಬುಧವಾರ ಸುರಿದ ದಾರಾಕಾರ ಮಳೆಗೆ ನೀಲಮ್ಮ ದೇವಪ್ಪ ಚಲವಾದಿ ಅವರ ಮನೆಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಎರಡು ದಿನಗಳಿಂದ ಮನೆ ಸುತ್ತ ನೀರು ಆವರಿಸಿಕೊಂಡು ನಿಂತಿದೆ.
ಮಳೆ ನೀರು ಅಷ್ಟೇ ಅಲ್ಲದೇ ಮನೆಯ ಪಕ್ಕದಿಲ್ಲಿಯೇ ನಿರ್ಮಿಸಿರುವ ನೀರಿನ ಟ್ಯಾಂಕಿನಿಂದ ಸೋರುವ ನಿರುಪಯುಕ್ತ ನೀರು ಸಹ ಮನೆಯ ಒಳಗೆ ನುಗ್ಗುತ್ತಿವೆ. ಸಿಸಿ ರಸ್ತೆಯ ಪಕ್ಕದಲ್ಲಿ ಚರಂಡಿ ನಿರ್ಮಿಸದೆ ಹಾಗೆ ಬಿಡಲಾಗಿದ್ದು, ರಸ್ತೆ ಮೇಲಿನ ಕಲುಷಿತ ನೀರು ಸಹ ನಮ್ಮ ಮನೆಯ ಅಂಗಳದಲ್ಲಿ ಅರಿಯುತ್ತಿವೆ ಎಂದು ನಿವಾಸಿ ತಮ್ಮ ಅಳಲು ತೊಡಗಿಕೊಂಡರು.
ಈ ಸಮಸ್ಯೆಗಳನ್ನು ಕೊಂಕಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಪರಿಹಾರ ನೀಡುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಬೇಗನೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಬಹುಜನ ಅಂಬೇಡ್ಕರ್ ಸಂಘ ವಿದ್ಯಾರ್ಥಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಯ್ಯಪ್ಪ ಗೊಂದೇನೂರ ಒತ್ತಾಯಿಸಿದ್ದಾರೆ.
‘ಗೊಂದೆನೂರು ಗ್ರಾದ ಸಮಸ್ಯೆ ಕುರಿತು ಗಮನಕ್ಕೆ ಬಂದಿದೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದ್ದೆವೆ. ಮುಂದಿನ ದಿನಗಳಲ್ಲಿ ಗ್ರಾಮ ಸಭೆ ಮಾಡಿ ಆಶ್ರಯ ಮನೆ ನೀಡಲಾಗುತ್ತದೆ. ಮತ್ತು ಅಲ್ಲಿ ಹೊಸದಾಗಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಪಿಡಿಒ ಪ್ರವೀಣ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.