ಕೆಂಭಾವಿ: ಪಟ್ಟಣದಲ್ಲಿ ಬುಧವಾರ ರಾತ್ರಿ ಎಡೆಬಿಡದೆ ಸುರಿದ ಭಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಕೆಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರ ರಾತ್ರಿ ಶುರುವಾದ ಮಳೆ ಮಧ್ಯರಾತ್ರಿ 2ರವರೆಗೆ ನಿರಂತರ ಸುರಿದಿದೆ. ಪಟ್ಟಣದ ಸಂಜೀವ ನಗರ ಬಡಾವಣೆ, ಆಶ್ರಯ ಕಾಲೋನಿ, ಕೆಳಗೇರಿ, ಹಿಂದಿನ ಬಜಾರ ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕುಲು ಬೆಳಗಿನ ಜಾವದವರೆಗೂ ಹೈರಾಣಾದರು.
ಮಳೆಗೆ ಬ್ರಾಹ್ಮಣ ಸಮಾಜದ ಸ್ಮಶಾನ ಮತ್ತೆ ಕೆರೆಯಂತಾಗಿದ್ದು, ಕೆಂಗೇರಿಯಿಂದ ಬರುವ ನೀರು ಮತ್ತು ಪಟ್ಟಣದ ಪ್ರಮುಖ ರಸ್ತೆಯ ನೀರು ಇದೇ ಸ್ಮಶಾನಕ್ಕೆ ನುಗ್ಗುತ್ತಿರುವುದರಿಂದ ಅವಾಂತರ ಸೃಷ್ಟಿಯಾಗುತ್ತಿದೆ.
ಈಗಾಗಲೆ ಪುರಸಭೆ ಆಡಳಿತ ಚರಂಡಿಗಳ ಮೇಲಿದ್ದ ಹಲವು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಚಗೊಳಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಹಲವು ಅನಾಹುತಗಳು ತಪ್ಪಿವೆ.
ಮಳೆಯಿಂದಸರ್ಕಾರಿ ಕಚೇರಿಗೂ ಬಿಸಿ ಮುಟ್ಟಿದ್ದು, ಕೆಂಗೇರಿ ಬಡಾವಣೆಯಲ್ಲಿರುವ ಉಪ ತಹಶೀಲ್ದಾರ್ ಕಚೇರಿ ಹಾಗೂ ಅಲ್ಲಿ ತೆರಳುವ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿ ಕೆರೆಯಂತಾಗಿದೆ, ಕಚೇರಿಯ ನೀರನ್ನು ಹೊರಹಾಕುವುದೆ ಪುರಸಭೆ ಮತ್ತು ಕಂದಾಯ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಟ್ಟಾರೆ ಬುಧವಾರ ಸುರಿದ ಮಳೆ ಮನೆ ಮತ್ತು ಬೆಳೆಗಳಿಗೂ ಹಾನಿ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಚಿಂತಾಜನಕರಾಗಿದ್ದಾರೆ. ಒಟ್ಟು 90.2 ಮಿ.ಮೀಮಳೆ ಪ್ರಮಾಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.