ADVERTISEMENT

ಯಾದಗಿರಿ: ಜಿಟಿಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ತ

ಹೊಲಗದ್ದೆಗಳಿಗೆ ನುಗ್ಗಿದ ನೀರು: ಭತ್ತ, ಹತ್ತಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 4:48 IST
Last Updated 26 ಸೆಪ್ಟೆಂಬರ್ 2020, 4:48 IST
ನೀರಿನಲ್ಲಿ ಮುಳುಗಿರುವ ಪಂಪ್ ಸೆಟ್‌ಗಳು
ನೀರಿನಲ್ಲಿ ಮುಳುಗಿರುವ ಪಂಪ್ ಸೆಟ್‌ಗಳು   

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿಯಿಂದ ಸುರಿದ ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೊರು (ಎಂ) ಗ್ರಾಮದಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದ ಭತ್ತ ಮತ್ತು ಹತ್ತಿ ಬೆಳೆಗಳು ನೆಲಕ್ಕಚ್ಚಿವೆ.

ADVERTISEMENT

ಕಕ್ಕೇರಾ ಪಟ್ಟಣ ವ್ಯಾಪ್ತಿಯಲ್ಲಿ 52 ಎಂಎಂ ಮಳೆಯಾಗಿದೆ ಎಂದು ವರದಿಯಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದನದಿ ಮತ್ತು ಹಳ್ಳದ ದಂಡೆಯ ನೂರಾರು ಪಂಪ್ ಸೆಟ್ ಗಳು ಮುಳುಗಡೆಯಾಗಿವೆ.

'ಕೃಷ್ಣ ನದಿಗೆ ನೀರು ಬಿಟ್ಟರೆ ರೈತರಿಗೆ ಮಾಹಿತಿ ಸಿಗುತ್ತಿತ್ತು. ಅಗ ರೈತರು ತಮ್ಮ ಪಂಪ್ ಸೆಟ್ ‌ಸ್ಥಳಾಂತರ ಮಾಡುತ್ತಿದ್ದರು. ಆದರೆ, ಈ ಬಾರಿ ಮಾಹಿತಿ ನೀಡಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು‌ ನುಗ್ಗಿದರಿಂದ‌ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲಾಡಳಿತ ಕೂಡಲೇ ಪರಿಶೀಲನೆ ಮಾಡಿ, ಬೆಳೆ ನಷ್ಟ ಮಾಹಿತಿ ಸಂಗ್ರಹಿಸಿ ರೈತರ ಪರಿಹಾರ ಧನ ನೀಡಬೇಕು' ಎಂದು‌ ಶಿವಾರಡ್ಡಿ ಪಾಟೀಲ್ ಕೊಳ್ಳೂರ (ಎಂ) ಆಗ್ರಹಿಸಿದ್ದಾರೆ.

ಜಲಾಶಯಕ್ಕೆ 90 ಸಾವಿರ ಕ್ಯುಸೆಕ್ ನೀರು ಒಳಹರಿವಿದ್ದು, ಜಲಾಶಯದಿಂದ 98 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಇನ್ನು ಜಿಲ್ಲೆಯ ಶಹಾಪುರದಲ್ಲಿ ಶುಕ್ರವಾರ ತಡ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದ ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ.

ನಗರದ ನಾಗರಕೆರೆಯ ನೀರು ಹೆದ್ದಾರಿ ಮೇಲೆ ಹರಿಯುತ್ತಿವೆ.ನಗರದ ತಗ್ಗು ಪ್ರದೇಶದ ಲಕ್ಷ್ಮಿನಗರ, ಸಿ.ಬಿ.ಕಮಾನ, ದೇವಿನಗರ, ಬಸವೇಶ್ವರ ನಗರ, ಆಶ್ರಯ ಕಾಲೊನಿ ಮುಂತಾದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ.

ನಗರದ ಬಸವೇಶ್ವರ ವೃತ್ತದಲ್ಲಿ ನೀರು ಸಂಗ್ರಹವಾಗಿ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಹತ್ತಿ, ತೊಗರಿ, ಶೇಂಗಾ ಬೆಳೆಗೆ ಹಾನಿಯಾಗಿದೆ.

'ಸದ್ಯಕ್ಕೆ ಯಾವುದೇ ಹಾನಿ ಮತ್ತು ಅವಘಡವಾದ ಬಗ್ಗೆ ವರದಿ ಬಂದಿಲ್ಲ' ಎಂದು ಶಹಾಪುರ ತಹಶೀಲ್ದಾರ ಜಗನಾಥರಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.