ಕಡೇಚೂರು(ಸೈದಾಪುರ): ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸಲು ಮಾನವ ಹಕ್ಕುಗಳು ಸಹಕಾರಿಯಾಗಿವೆ ಎಂದು ಕಡೇಚೂರು ಪ್ರೌಢ ಶಾಲೆ ಮುಖ್ಯಶಿಕ್ಷಕ ಜಾಫರ್ ಷರೀಫ್ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು ಗ್ರಾಮದ ಪ್ರೌಢ ಶಾಲೆಯಲ್ಲಿ ಕಲಿಕೆ- ಟಾಟಾ ಟ್ರಸ್ಟ್, ಟೈಟಾನ್ ಕಂಪನಿಯ ಕನ್ಯಾ ಸಂಪೂರ್ಣ ಕಾರ್ಯಕ್ರಮದಡಿ ಬುಧವಾರ ಮಾನವ ಹಕ್ಕುಗಳ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
1ನೇ ಮತ್ತು 2ನೇ ಮಹಾಯುದ್ದದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದರು. ಇದು ಹೀಗೆ ಮುಂದುವರೆದರೆ ಮಾನವ ಕುಲ ನಾಶವಾಗುತ್ತದೆ ಎಂದು ಜಾಗತಿಕವಾಗಿ ಚಿಂತಿಸಿ ವಿಶ್ವಸಂಸ್ಥೆ 1948 ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನವನ್ನು ಜಾರಿಗೆ ತಂದಿತು. ಇದರಿಂದಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಹಾಯಕಾರಿಗಿದೆ ಎಂದರು.
ನಂತರ ಪ್ರಾಸ್ತಾವಿಕವಾಗಿ ಮತ್ತು ಶಿಕ್ಷಣದ ಮಹತ್ವ ಕುರಿತು ಕಲಿಕೆ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಮರೆಪ್ಪ ನಂದಿಹಳ್ಳಿ ಉಪನ್ಯಾಸ ನೀಡಿದರು. ಪೌಷ್ಟಿಕ ಆಹಾರಗಳ ಸೇವನೆ ಕುರಿತು ಶಿಕ್ಷಕರಾದ ಮಾರ್ಕ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಡೇಚೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮಂತ, ದ್ವಿತೀಯ ದರ್ಜೆ ಸಹಾಯಕರಾದ ಲಕ್ಷ್ಮಣ, ಮಮತಾ, ಶಿಕ್ಷಕರಾದ ಮಾರ್ಕ್, ಧರ್ಮರಾಜ ಬಾಣವರ್, ತಬಸುಮ್, ಅತಿಥಿ ಶಿಕ್ಷಕರಾದ ಆಂಜನೇಯ, ಅಜೀಂ, ಮಹಾದೇವಿ, ಶಿವಮ್ಮ, ಕಚೇರಿ ಸಹಾಯಕ ಸಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.