ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಸಾಮರಸ್ಯದೊಂದಿಗೆ ಹಬ್ಬವನ್ನು ಆಚರಿಸಿದರು.
ಹುಣಸಗಿ ಪಟ್ಟಣದಲ್ಲಿ ಶನಿವಾರ ಕತಲ್ ರಾತ್ರಿ ಅಂಗವಾಗಿ ಪೀರಾ ದೇವರಿಗೆ ನೈವೇದ್ಯ, ಊದು ಹಾಗೂ ಸೇರೆ (ಹೂವಿನ ಅಲಂಕಾರ) ಸಮರ್ಪಿಸಲಾಯಿತು
ವಜ್ಜಲ ಹಾಗೂ ಚನ್ನೂರು, ಇಸಂಪೂರ್ ಮತ್ತಿತರ ಗ್ರಾಮದಲ್ಲಿ ಕತಲ್ ರಾತ್ರಿ ಅಂಗವಾಗಿ ಗ್ರಾಮದ ಬಹುತೇಕ ಜನರು ಉಪವಾಸ ವೃತ ಆಚರಿಸಿದರು. ಸಾಯಂಕಾಲ ದೇವರಿಗೆ ಕೊಬ್ಬರಿ, ನಿಂಬೆಹಣ್ಣು ಉಡಿ ಕಟ್ಟುವುದು ಮತ್ತು ಮಾಲದಿ ನೈವೇದ್ಯ ಸಮರ್ಪಿಸಿದ ಬಳಿಕ ತಮ್ಮ ಮನೆಗಳಲ್ಲಿ ಪಖೀರ್ ಅವರಿಗೆ ಅನ್ನ ಸಂತರ್ಪಣೆ ಮಾಡಿ ಬಳಿಕ ಎಲ್ಲರೂ ಊಟ ಮಾಡಿದರು.
ಭಾನುವಾರ ಬೆಳಿಗ್ಗೆ ಹಸೇನ್ ಹಾಗೂ ಹುಸೇನ್, ಸೈಯದ್ ಕಾಶಿಂ, ಅಬ್ಬಾಸ ಅಲಿ, ಹಾಗೂ ಇತರ ದೇವರ ಸವಾರಿ ನಡೆಯಿತು.
ಸಂಜೆ ದಫನ್ ಕಾರ್ಯಕ್ರಮದೊಂದಿಗೆ ಮೊಹರಂ ಹಬ್ಬ ಸಮಾಪ್ತಿಯಾಯಿತು.
ವಜ್ಜಲ ದಲ್ಲಿ ನಡೆದ ಮೊಹರಂನಲ್ಲಿ ಬಂಡೆಪ್ಪನಹಳ್ಳಿಯ ಸಣ್ಣಕೆಪ್ಪ ಮುತ್ಯಾ, ನಾವದಗಿಯ ಬಸವರಾಜ ಪೂಜಾರಿ, ಭೀಮರಾಯ ಪೂಜಾರಿ, ಯಲ್ಲಣ್ಣ ಮುತ್ಯಾ ಮಾಳನೂರು, ಭೀಮಣ್ಣ ಪೂಜಾರಿ ಸೈಯದಸಾಬ ಚನ್ನೂರ, ಅಲ್ಲಾಸಾಬ, ರಾಜಶೇಖರಗೌಡ ಪಾಟೀಲ, ಮೋಹನ ಕುಲಕರ್ಣಿ, ಸಂಗನಗೌಡ ಪೊಲೀಸ್ ಪಾಟೀಲ,ಸಾಹೇಬಗೌಡ ಶ್ರೀಗಿರಿ, ಅಮರೇಶ ಬಸನಗೌಡ್ರ, ಶಿವಲಿಂಗಪ್ಪ ಭಜನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.