ADVERTISEMENT

ಕೊಡೇಕಲ್ಲ ದರ್ಗಾ ಆವರಣದಲ್ಲಿ ಹೋಮ, ಕುರಾನ್ ಪಠಣ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 16:42 IST
Last Updated 11 ಸೆಪ್ಟೆಂಬರ್ 2020, 16:42 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ದಾವಲ ಮಲೀಕ್ ದರ್ಗಾದ ಅನಾಥ ಮಕ್ಕಳ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಕೊರೊನಾ ನಿವಾರಣೆಗಾಗಿ ಹೋಮ ಹವನ ಕಾರ್ಯಕ್ರಮ ನಡೆಯಿತು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ದಾವಲ ಮಲೀಕ್ ದರ್ಗಾದ ಅನಾಥ ಮಕ್ಕಳ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಕೊರೊನಾ ನಿವಾರಣೆಗಾಗಿ ಹೋಮ ಹವನ ಕಾರ್ಯಕ್ರಮ ನಡೆಯಿತು   

ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಗ್ರಾಮವು ಭಾವೈಕ್ಯತೆಯ ತಾಣವಾಗಿದ್ದು, ಕಾಲಜ್ಞಾನಿ ಬಸವೇಶ್ವರರ ತಪೋಭೂಮಿಯೂ ಆಗಿದೆ. ಗ್ರಾಮದ ಹೊರವಲಯದಲ್ಲಿರುವ ದಾವಲ ಮಲೀಕ್ ದರ್ಗಾದ ಅನಾಥಾಶ್ರಮದಲ್ಲಿ ಶುಕ್ರವಾರ ಹೋಮ ಹವನ ಹಾಗೂ ಕುರಾನ್ ಪಠಣದ ಮೂಲಕ ಮತ್ತೊಮ್ಮೆ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.‌

ಆಶ್ರಮದ ದಾವಲ ಮಲೀಕ್ ಮುತ್ಯಾ ಮಾತನಾಡಿ, ಕೊರೊನಾದಿಂದವಿಶ್ವವೇ ತತ್ತರಿಸಿದೆ. ಕೋವಿಡ್ ದೂರವಾಗಿ ಶಾಂತಿ ನೆಲೆಸಬೇಕು. ನಾಡಿನಲ್ಲಿ ಜನ ಜಾನುವಾರು ಚೆನ್ನಾಗಿ ಇರಬೇಕು ಎಂಬ ಸಂಕಲ್ಪದೊಂದಿಗೆ ಲೋಕ ಕಲ್ಯಾಣಾರ್ಥ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕೊಡೇಕಲ್ಲ ಬಸವಣ್ಣ ಹಾಗೂ ತಿಂಥಣಿಯ ಮೌನೇಶ್ವರರು ಭಾವೈಕ್ಯತೆಯ ಮೂಲಕ ಪಾವನಗೊಳಿಸಿದ್ದು, ಹಿಂದೂ ಮುಸ್ಲಿಮರಿಗೆ ಚಂದ್ರಮನೊಬ್ಬನೇ ಎಂದು ಸಾರಿದ್ದಾರೆ. ಆದ್ದರಿಂದ ಇದೇ ತಾಣದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ADVERTISEMENT

ವೈದಿಕ ವೃಂದದವರಿಂದ ಶುಕ್ರವಾರ ಬೆಳಗಿನ ಜಾವದಿಂದ ಮಧ್ಯಾಹ್ನದವರೆಗಿನ ಶುಭ ಮುಹೂರ್ತದಲ್ಲಿ ನವಗ್ರಹ ಗಣ ಹೋಮ, ಪ್ರತ್ಯಂಗಿರಾ ಹೋಮ, ಚಂಡಿ ಹೋಮ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬಳಿಕ ಹುಲಕಲ್ (ಜೆ) ಸಜ್ಜದ್ ನಾಶಿನ್ ಹಜರತ್ ಮೋಸಿನ್ ಸಾಹೇಬ ಅವರು ಇಸ್ಲಾಂ ಧರ್ಮದ ಪವಿತ್ರ ಕುರಾನ್ ಪಠಣ ಮಾಡಿದರು.

ಕವಡಿಮಟ್ಟಿಯ ಹಿರೇಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿ ಪರಂಪರೆಗಳಲ್ಲಿ ಹೋಮ ಹವನ ಕಾರ್ಯ ಕ್ರಮಗಳಿಗೆ ವಿಶೇಷವಾದ ಸ್ಥಾನವಿದೆ. ಹೋಮದಿಂದ ಸೂಸುವ ಗಾಳಿ ವಾತಾವ ರಣದಲ್ಲಿ ಹೊಸ ಶಕ್ತಿ ನೀಡುವುದರಲ್ಲಿ ಎರಡು ಮಾತಿಲ್ಲ ಎಂದರು.

ಲೋಟಗೇರಿಯ ಗುರುಮೂರ್ತಿ ದೇವರು, ಮುದ್ದೇಬಿಹಾಳದ ಲಾಲಲಿಂಗೇಶ್ವರ ಶರಣರು, ಕೊಪ್ಪಳದ ಬಸವರಾಜ ಶಾಸ್ತ್ರಿ, ಭೂದಾನಿ ಕನಕು ರಂಗನಾಥ ದೊರೆ, ತಾಲ್ಲುಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ್, ಮುರುಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.