ಯಾದಗಿರಿ: ಜಿಲ್ಲೆಯ ಕೆಂಭಾವಿ ಪಟ್ಟಣದ ದೇವಿ ಬಟ್ಟೆ ಅಂಗಡಿಯ ಕ್ಯಾಷ್ ಕೌಂಟರ್ನಲ್ಲಿದ್ದ ಬಾಲಕನಿಗೆ ಯಾಮಾರಿಸಿ ₹50 ಸಾವಿರ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಹಣ ಎಗರಿಸಿರುವ ದೃಶ್ಯ ದಾಖಲಾಗಿದೆ.
ಜುಲೈ 1ರಂದು ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿ, ಬಾಲಕನ ಗಮನ ಬೇರೆಡೆ ಸೆಳೆದು ಎರಡ್ಮೂರು ಬಾರಿ ಗಲ್ಲಾ ಪೆಟ್ಟಿಗೆ ತೆಗಿಸಿ ಹಣ ಲಪಟಾಯಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ವ್ಯಕ್ತಿ ಶವವಾಗಿ ಪತ್ತೆ: ಜೂನ್ 29 ರಂದು ಕಾಣೆಯಾಗಿದ್ದ ಯುವಕ ಜಿಲ್ಲೆಯ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೇಣುಗೋಪಾಲ ಸತ್ಯನಾರಾಯಣ (28) ಶವವಾಗಿ ಪತ್ತೆಯಾದ ಯುವಕ. ಮೃತನ ತಂದೆ ದೂರು ನೀಡಿದ್ದು, ಮಗ ಹೊಟ್ಟೆ ನೋವುನಿಂದ ಬಳಲುತ್ತಿದ್ದ. ಜೂನ್ 29 ರಂದು ಬೆಳಿಗ್ಗೆ ಬಹಿರ್ದೆಸೆಗೆ ಹೋಗುತ್ತೇನೆ ಎಂದು ಹೋದವ ಮರಳಿರಲಿಲ್ಲ. ಬಾವಿಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಸಾವು: ಹುಣಸಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.