ಹುಣಸಗಿ: ‘ಶ್ರಾವಣ ಮಾಸದಲ್ಲಿ ಕೈಗೊಳ್ಳುವ ಪ್ರತಿಯೊಂದು ಧಾರ್ಮಿಕ ಕಾರ್ಯವೂ ಅತ್ಯಂತ ಶ್ರೇಷ್ಠ. ಅದರಲ್ಲೂ ಈ ಮಾಸದಲ್ಲಿ ಮಾಡುವ ದಾನ, ಧರ್ಮ, ಜಪ ಕಾರ್ಯಗಳು ಹೆಚ್ಚು ಶಕ್ತಿ ಹಾಗೂ ಮಾನಸಿಕ ನೆಮ್ಮದಿ ಕೊಡುತ್ತವೆ’ ಎಂದು ಜಾಲಹಳ್ಳಿಯ ಜಯಶಾಂತಲಿಗೇಶ್ವರ ಸ್ವಾಮೀಜಿ ಹೇಳಿದರು.
ಹುಣಸಗಿ ಪಟ್ಟಣದ ಹೊರವಲಯದಲ್ಲಿರುವ ಖೋಜಾಪೂರ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಶಿವಲಿಂಗ ಹಾಗೂ ನಂದಿ ಸ್ಥಾಪನೆಯ ಬಳಿಕ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನವನ ಮುಕ್ತಿ ಸಾಧನ ಪಥದಲ್ಲಿ ಈ ಎಲ್ಲವೂ ಅಡಗಿದೆ. ನಾವು ಮಾಡುವ ಸತ್ಕರ್ಮಗಳು ನಮ್ಮ ಜೀವನದ ಪ್ರತಿ ಕ್ಷಣದಲ್ಲಿಯೂ ನಮ್ಮ ಜೊತೆ ಇರುವ ಬುತ್ತಿ ಎಂದು ಹೇಳಿದರು.
ಬಂಡೆಪ್ಪನಹಳ್ಳಿಯ ಸಣ್ಣಕೆಪ್ಪ ಮುತ್ಯಾ ಶರಣರು ಮಾತನಾಡಿದರು.
ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಶಿವಲಿಂಗ ಪ್ರತಿಷ್ಠಾಪನೆ, ಹೋಮ ಹವನ, ಸಹಸ್ರ ಬಿಲ್ವಾರ್ಚನೆ, ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆದವು. ಬೆಳಿಗ್ಗೆಯಿಂದ ಹುಣಸಗಿ, ಗುಳಬಾಳ, ರಾಜನಕೋಳೂರು, ಕುಪ್ಪಿ, ಬನ್ನೆಟ್ಟಿ, ದೇವಾಪುರ(ಜೆ), ಮಾರಲಬಾವಿ, ಮಾಳನೂರು ಹಾಗೂ ದ್ಯಾಮನಾಳ ಸೇರಿದಂತೆ ಇತರ ಗ್ರಾಮಗಳ ಭಕ್ತರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತಾಳಿಕೋಟೆಯ ದೀಪಕ್ ಹಜೇರಿ, ಈಶ್ವರ ಬಡಿಗೇರ, ಗುರುಪಾದಪ್ಪ ಬಿರಾದರ, ಅಶೋಕ ರಾಜನಕೋಳೂರು, ಸೋಮಶೇಖರ ಜಕ್ಕಂಶೆಟ್ಟಿ ಹಾಗೂ ಇತರರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಹಿರಿಯರಾದ ನಾಗಪ್ಪ ಅಡಿಕ್ಯಾಳ, ಮಲ್ಲಿಕಾರ್ಜುನ ಸ್ವಾಮಿ ಸ್ಥಾವರಮಠ, ಸೂಗೂರು ಶರಣಪ್ಪ, ಟಿ.ಎಸ್.ಚಂದಾ, ವಿರೇಶ ಚಿಂಚೋಳಿ, ಸುರೇಶ ದೊರೆ, ಶಿವನಗೌಡ ಪೊಲಿಸ್ ಪಾಟೀಲ, ಸೋಮಶೇಖರ ಸ್ಥಾವರಮಠ, ಅನಂತ ದೇಶಪಾಂಡೆ, ರವಿ ಪುರಾಣಿಕಮಠ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಹುಣಸಗಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.