ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿದೆ.
ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನಿಗಳಿಗೆ ನೀರು ನುಗ್ಗಿದೆ.
ಪೊಲೀಸ್ ಬ್ಯಾರಿಕೇಡ್: ಸೇತುವೆ ಮುಳುಗಿದ್ದರಿಂದ ಜನ, ವಾಹನ ಸಂಚಾರ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಶುಕ್ರವಾರ ಸಂಜೆಯಿಂದಲೇ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
3.50 ಲಕ್ಷ ಕ್ಯುಸೆಕ್ ನೀರು: ಆಲಮಟ್ಟಿ ಜಲಾಶಯಕ್ಕೆ 3.50 ಲಕ್ಷ ಕ್ಯುಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಇದರಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಶನಿವಾರ ಬೆಳಿಗ್ಗೆ 11ಕ್ಕೆ 3.50 ಲಕ್ಷ ಕ್ಯುಸೆಕ್ ಗೆ ಏರಿಕೆಯಾಗಲಿದೆ. ಇದರಿಂದ ನದಿ ಅಕ್ಕಪಕ್ಕದ ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗಲಿದೆ.
‘ಪ್ರತಿ ವರ್ಷ ಪ್ರವಾಹ ಎದುರಿಸುತ್ತಿದ್ದು, ಜಮೀನುಗಳು ಮುಳುಗಡೆಯಾಗಲಿವೆ. ಇದರಿಂದ ರೈತರಿಗೆ ಪ್ರತಿವರ್ಷ ನಷ್ಟ ಉಂಟಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು’ ಎಂದು ಕೊಳ್ಳೂರು (ಎಂ) ಗ್ರಾಮಸ್ಥ ಶಿವಾರೆಡ್ಡಿ ಪಾಟೀಲ ಆಗ್ರಹಿಸುತ್ತಾರೆ.
ಕೋಡೆಕಲ್ ಸಮೀಪದ ಛಾಯಾ ಭಗವತಿ ದೇವಸ್ಥಾನ ನೀರಿನಿಂದ ಆವೃತ್ತವಾಗಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಮೆಟ್ಟಲಲ್ಲಿ ದೇವಿ ಮೂರ್ತಿ ಇಡಲಾಗಿದೆ. ಭಕ್ತರು ಇಲ್ಲಿಂದಲೇ ದರ್ಶನ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.