ಯಾದಗಿರಿ: ಜಿಲ್ಲೆಯಲ್ಲಿ ಬುಧವಾರವೂ ತುಂತುರು ಮಳೆ ಮುಂದುವರಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ.
ಭತ್ತ ಮಳೆಗಾಳಿಗೆ ನೆಲಕಚ್ಚಿದೆ. ಸಜ್ಜೆ ಬೆಳೆ ಮೊಳಕೆ ಹೊಡಿದಿವೆ. ಮೆಣಸಿನ ಗಿಡ ನೆಲಬಿಟ್ಟು ಮೇಲೆದ್ದಿಲ್ಲ.
ಶಹಾಪುರದಲ್ಲಿ ಬುಧವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿವೆ. ಹತ್ತಿ ಬೆಳೆಗೆ ಹೆಚ್ಚಿನ ತೊಂದರೆಯಾಗಿದೆ. ತಾಲ್ಲೂಕಿನ ಭೀಮಾ, ಕೃಷ್ಣಾ ನದಿ ದಂಡೆಯ 44 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಶೀತಗಾಳಿ ಬೀಸುತ್ತಿದ್ದು, ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ.
ಸೈದಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 11:30ರಿಂದ ಧಾರಾಕಾರ ಮಳೆಯಾಗಿದೆ. ಈಗ ಜಿಟಿಜಿಟಿ ಮಳೆ ಆರಂಭವಾಗಿದೆ. ಹೊಲಗಳೆಲ್ಲವು ನೀರಿನಿಂದ ತುಂಬಿಕೊಂಡು ಬೆಳೆ ನಾಶವಾಗುವ ಸಾಧ್ಯತೆ ಇದೆ.
'ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಪ್ರಾಮಾಣಿಕವಾಗಿ ವರದಿ ತಯಾರಿಸಿ ಬಡವರಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.