ಯಾದಗಿರಿ: ತಾಲ್ಲೂಕಿನ ಸೈದಾಪುರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣ ಮಾಡಲು ತಕ್ಷಣ ಕ್ರಿಯಾ ಯೋಜನೆ ತಯಾರಿಸಿ ನಿಗಮಕ್ಕೆ ಸಲ್ಲಿಸಿ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಯಾದಗಿರಿ ವಿಭಾಗೀಯ ನಿಯಂತ್ರಣ ಅಧಿಕಾರಿಗೆ ಸೂಚಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶ್ರೇಣಿಕಕುಮಾರ ದೋಖಾ ಮನವಿ ಮೇರೆಗೆ ಸೈದಾಪುರ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಬಸ್ ನಿಲ್ದಾಣ ಸ್ಥಳ ಮತ್ತು ಡಿಪೋ ನಿರ್ಮಾಣ ಮಾಡಲು ಜಾಗ ಪರಿಶೀಲನೆ ಮಾಡಿದರು. 7 ಎಕರೆ 20 ಗುಂಟೆ ಜಮೀನು ನಿಗಮಕ್ಕೆ ಮಂಜೂರು ಮಾಡಲು ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಶ್ರೇಣಿಕ್ಕುಮಾರ ದೋಖಾ, ಈ ಭಾಗದಲ್ಲಿ 70ಕ್ಕೂ ಹೆಚ್ಚು ಗ್ರಾಮಗಳಿವರ. ಸೈದಾಪುರ ಗ್ರಾಮದಲ್ಲಿ ಬಸ್ ನಿರ್ಮಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ನಮ್ಮ ಭಾಗದವರೇ ಆದ ತಾವುಗಳು ಈ ಭಾಗದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ನಂತರ ಮಾತನಾಡಿದ ಎಂ.ಡಿ. ರಾಚಪ್ಪ, ಸೈದಾಪುರ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲು ಕನಿಷ್ಠ ₹50 ಲಕ್ಷದವರೆಗೆ ಬೇಕಾಗುತ್ತದೆ. ಅದಕ್ಕೆ ನಮ್ಮ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತದೆ. ಇನ್ನುಳಿದಂತೆ ಬಸ್ ಡಿಪೋ ನಿರ್ಮಿಸಲು ಸುಮಾರು ₹10 ಕೋಟಿ ಅನುದಾನ ಬೇಕಿದ್ದು, ನಮ್ಮ ಸಂಸ್ಥೆಯಿಂದ ಕ್ರಿಯಾ ಯೋಜನೆ ತಯಾರಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಈ ಭಾಗದ ಜನಪ್ರತಿನಿಧಿಗಳ ಸಹಕಾರದೊಂದಿಗೆ ತಾವುಗಳು ಶ್ರಮಿಸಿದರೆ ಒಳಿತಾಗುತ್ತದೆ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಡಿಪೋ ಮಂಜೂರಾತಿಗಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸುತ್ತೇವೆ. ತಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.
ಪಟ್ಟಣಕ್ಕೆ ಸುತ್ತಮುತ್ತಲಿನ 70ಕ್ಕೂ ಹೆಚ್ಚು ಹಳ್ಳಿಗಳ ಜನರು ನಿತ್ಯಾ ವ್ಯಾಪಾರ ವಹಿವಾಟು ಸಲುವಾಗಿ ಆಗಮಿಸುತ್ತಿದ್ದು, ಸೈದಾಪುರಕ್ಕೆ ಕನಿಷ್ಠ 6 ಸುಸಜ್ಜಿತ ಬಸ್ಗಳನ್ನು ನೀಡಬೇಕೆಂದು ಎಂಡಿ ಅವರಿಗೆ ಮನವಿ ಮಾಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ವಿಭಾಗೀಯ ನಿಯಂತ್ರಣ ಅಧಿಕಾರಿ ಹರಿಬಾಬು, ಪಿಡಿಒ ಮೌಲಾಲಿ ಐಕೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.