ADVERTISEMENT

ಗುರುಮಠಕಲ್‌ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭೀತಿಯ ವಾತಾವರಣ

ಎಂ.ಪಿ.ಚಪೆಟ್ಲಾ
Published 17 ಸೆಪ್ಟೆಂಬರ್ 2025, 6:33 IST
Last Updated 17 ಸೆಪ್ಟೆಂಬರ್ 2025, 6:33 IST
<div class="paragraphs"><p>ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ತೋರಿಸಿದ ಯುವಕ ಮಂಜುನಾಥ ಕೊಲ್ಲೂರು</p></div>

ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ತೋರಿಸಿದ ಯುವಕ ಮಂಜುನಾಥ ಕೊಲ್ಲೂರು

   

ಗುರುಮಠಕಲ್‌: ತಾಲ್ಲೂಕಿನ ಮಿಟ್ಟತಿಪಡಂಪಲ್ಲಿ (ಎಂ.ಟಿ.ಪಲ್ಲಿ) ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಜನರು ಕೀಟನಾಶಕ ಸಿಂಪಡಣೆ, ಭತ್ತದ ಗದ್ದೆಗೆ ರಸಗೊಬ್ಬರ ಸಿಂಪಡಣೆ, ದನ ಮತ್ತು ಕುರಿ ಮೇಯಿಸಲು ಹೋಗಲು ಭಯಪಡುತ್ತಿದ್ದಾರೆ.

ಭಾನುವಾರ (ಸೆ.7) ರಾತ್ರಿವೇಳೆ ಜಮೀನಿನಲ್ಲಿದ್ದ ಗ್ರಾಮದ ಹಿರಿಯ ನಾಗರಿಕ ಭೀಮಶಪ್ಪ ಬುರನೋಳ ಅವರ ಜಮೀನಿನ ಹತ್ತಿರದ ರಸ್ತೆ ಬದಿಯಿಂದ ಜಿಗಿದು ಪಕ್ಕದ ಕುರುಚಲು ಕಾಡಿಗೆ ಸೇರಿಕೊಂಡಿತ್ತು.

ADVERTISEMENT

ಅಲ್ಲಿಂದ 'ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಬಂದ ದ್ವಿಚಕ್ರವಾಹನಕ್ಕೆ ಕೈಮಾಡಿದ್ದು, ದ್ವಿಚಕ್ರದಲ್ಲಿದ್ದವರಿಗೆ ವಿಷಯ ತಿಳಿಸಿದೆ. ಅವರೇ ನನ್ನನ್ನು ಗ್ರಾಮಕ್ಕೆ ಹಿಂದಿರುಗಿಸಿದರು. ಮನೆಗೆ ತಲುಪಿದ ನಂತರ ಜೀವಬಂದಂತಾಯ್ತು' ಎಂದು ಭೀಮಶಪ್ಪ ಅವರು
ವಿವರಿಸಿದರು.

ಅದಾದ ನಂತರ ಆಗಾಗ ಹುಲಿ (ಚಿರತೆ) ಕಾಣುತ್ತಿರುವ ಕುರಿತು ಕಾಡಿಗೆ ದನ ಮೇಯಿಸಲು ಹೋದವರು ಹೇಳುತ್ತಿದ್ದರು. ಆದ್ದರಿಂದ ರಾತ್ರಿ ವೇಳೆ ಭತ್ತಕ್ಕೆ ನೀರುಣಿಸಲು ಹೋಗಲು ಭಯ. ಹೊರಗೆ ತಿರುಗುವುದಕ್ಕೂ ಎದೆ ನಡುಗುತ್ತಿತ್ತು ಎನ್ನುವವುದು ಲಕ್ಷ್ಮಿ ಕಾಶಪ್ಪ ಅವರ ಭೀತಿಯ ಮಾತುಗಳು.

ಗ್ರಾಮದ ಹೊರವಲಯದಲ್ಲಿ ಸೋಮವಾರ(ಸೆ.15) ಸಂಜೆ ದನ ಮೇಯಿಸುವ ವೇಳೆ ಯುವ ದನಗಾಹಿ ನಾಗೇಂದ್ರಪ್ಪ ಕೊಲ್ಲೂರು ಅವರು ಜಾನುವಾರುಗಳಿಂದ ದೂರದಲ್ಲಿ ನಿಂತಿದ್ದರು. ಆಗ ಕರುಗಳ ಮೇಲೆ ಚಿರತೆ ದಾಳಿ ಮಾಡಿದೆ. ಕೂಡಲೇ ಜತೆಯಲ್ಲಿದ್ದವರನ್ನು ನಾಗೇಂದ್ರಪ್ಪ ಕೂಗಿ ಕರೆದಿದ್ದು, ಗದ್ದಲದ ಕಾರಣ ಚಿರತೆ ಪಲಾಯನಗೈದಿದೆ.

ನಾಗೇಂದ್ರಪ್ಪ ಹಾಗೂ ಉಳಿದ ದನಗಾಹಿಗಳು ಚಿರತೆ ದಾಳಿ ಮಾಡಿದ ವಿಷಯ ತಿಳಿಸಿದ ನಂತರ ಗ್ರಾಮದ ಜನರಲ್ಲಿ ಚಿರತೆಯ ಭೀತಿ ಇನ್ನೂ ಹೆಚ್ಚಿದೆ. ಅರಣ್ಯ ಇಲಾಖೆಯವರು ರೈತರ ಭಯವನ್ನು ಹೋಗಲಾಡಿಸಿ, ಚಿರತೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಕ್ರಮವಹಿಸಲಿ ಎಂದು ಕೋರಿದ್ದು ಕೃಷಿಕರಾದ ಮಂಜುನಾಥ, ಶಂಕ್ರಪ್ಪ ಮೀನಿಗಿರಿ.

ಸದ್ಯ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಸಂಚರಿಸುತ್ತಿರುವ ಕುರಿತು ಭಯದ ವಾತಾವರಣ ಹೆಚ್ಚುತ್ತಿದೆ. ಅರಣ್ಯ ಇಲಾಖೆಯವರು ಕೂಡಲೇ ಚಿರತೆಯನ್ನು ಸೆರೆಹಿಡಿದು, ಬೇರೆಡೆ ಸ್ಥಳಾಂತರಿಸಲಿ ಎನ್ನುವ ಮನವಿ
ಗ್ರಾಮಸ್ಥರದು.

ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಭಯ

ಸೆ.15ರಂದು ಜಾನುವಾರು ಮೇಲೆ ದಾಳಿ

ಸೆರೆಹಿಡಿಯಲು ಅರಣ್ಯ ಇಲಾಖೆಗೆ ಮೊರೆ

ಚಿರತೆ ದಾಳಿ ದನಗಳ ಮೇಲೆ ದಾಳಿ ನಡೆಸಿದ್ದು, ದನಗಾಹಿಗಳೆಲ್ಲರೂ ಸದ್ದು ಮಾಡಿದ್ದರಿಂದ ಬಿಟ್ಟು ಹೋಗಿದೆ ಸಂಬಂಧಿತರು ಕ್ರಮವಹಿಸಿ
ಬಾಲಪ್ಪ ಬುರನೋಳ,ರೈತ
ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಹತ್ತು ದಿನಗಳಿಂದಲೂ ಚಿರತೆ ಅಲ್ಲಲ್ಲಿ ಕಾಣಿಸಿದೆ. ಜಮೀನಿನಲ್ಲಿ ಹೆಜ್ಜೆ ಗುರುತು ಕಾಣಿಸಿದ್ದು, ಭಯವಾಗುತ್ತಿದೆ
ಲಕ್ಷ್ಮೀ ದೇವಿಂದ್ರಪ್ಪ, ರೈತ ಮಹಿಳೆ
ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ರೈತರು ರಾತ್ರಿವೇಳೆ ಒಂಟಿಯಾಗಿ ಸಂಚರಿಸಬೇಡಿ. ಅರಣ್ಯ ಇಲಾಖೆ ಕೂಡಲೇ ಚಿರತೆ ಸ್ಥಳಾಂತರಕ್ಕೆ ಕ್ರಮವಹಿಸಲಿ
ರವಿ ಬಿ,ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ

ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಹೊರವಲಯದ ಜಮೀನಿನಲ್ಲಿದ್ದ ಚಿರತೆಯ ಹೆಜ್ಜೆ ಗುರುತು

ತಾಲ್ಲೂಕಿನಲ್ಲಿ ಚಿರತೆಯ ‘ಹೆಜ್ಜೆ ಗುರುತುಗಳು’
lಈ ಹಿಂದೆ 2021ರ ಜನೆವರಿ 28 (ಗುರುವಾರ) ತಾಲ್ಲೂಕಿನ ಮಿನಾಸಪುರ ಗ್ರಾಮದ ಹೊರವಲಯದ ಕೆರೆ ಪ್ರದೇಶದಲ್ಲಿ ರಾತ್ರಿವೇಳೆ ಮೀನಿಗೆ ಆಹಾರ ನೀಡಲೆಂದು ಮಲಗಿದ್ದ ತಂಡದ ಸದಸ್ಯ ಹಣಮಂತು ಎನ್ನುವವರ ಮೇಲೆ ದಾಳಿ ನಡೆಸಿತ್ತು. l2022ರ ಸೆಪ್ಟೆಂಬರ್ 10(ಶನಿವಾರ) ಅಂದಿನ ಪಿಐ ದೌಲತ್‌ ಎನ್‌.ಕುರಿ ಅವರು ರಾತ್ರಿ ವೇಳೆ ಗಸ್ತಿನಲ್ಲಿರುವಾಗ ರಸ್ತೆ ಬದಿಯಲ್ಲೇ ಚಂಡ್ರಿಕಿ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ತಮ್ಮ ಪೊಲೀಸ್‌ ಸಿಬ್ಬಂದಿಯ ಜತೆಗೆ ಪಂಚಾಯಿತಿ ಸಿಬ್ಬಂದಿಯ ಸಹಾಯ ಪಡೆದು ಮುಂಜಾಗ್ರತೆ ವಹಿಸಲು ಗ್ರಾಮದಲ್ಲಿ ಜಾಗೃತಿ ಮೂಡಿಸಿದ್ದರು. l2022ರ ಅಕ್ಟೋಬರ್ 24 ರಂದು ತಾಲ್ಲೂಕಿನ ಬೆಟ್ಟದಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಸೇನ್‌ ಸಾಬ್‌ ಮತ್ತು ಮೊಗುಲಮ್ಮ ಅವರು ಕುರಿ-ಆಡು ಮೇಯಿಸುವಾಗ ಒಂದು ಆಡು ಚಿರತೆ ಪಾಲಾಗಿತ್ತು. ಅಕ್ಟೋಬರ್ 30 ರಂದು ತಾಲ್ಲೂಕಿನ ಕೇಶ್ವಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಡುಗಳ ಮೇಲೆ ಚಿರತೆ ದಾಳಿನಡೆಸಿತ್ತು. lಅದೇ ತಿಂಗಳ ಕೊನೆಯ ದಿನ (2022ರ ಅ.31) ತಾಲ್ಲೂಕಿನ ಗುಂಜನೂರು ಗ್ರಾಮದ ಮೊಗುಲಾನ್‌ಸಾಬ್‌ ಅವರ ದೊಡ್ಡಿಯಲ್ಲಿ ಕಟ್ಟಿದ್ದ 2 ಮರಿ ಸೇರಿ ಒಟ್ಟು 6 ಕುರಿಗಳು ಸತ್ತಿದ್ದವು. ಅನುಮಾನಗೊಂಡು ಪಶುವೈದ್ಯಕೀಯ ಇಲಾಖೆಯಿಂದ ಪರಿಶೀಲನೆ ನಡೆಸಿದಾಗ ಕುರಿಗಳ ಉಳಿದ ಶರೀರದ ಭಾಗಗಳಲ್ಲಿದ್ದ ಗಾಯಗಳು ಮತ್ತು ಇತರೆ ಗುರುತುಗಳಿಂದ ಚಿರತೆ ದಾಳಿ ನಡೆಸಿದ್ದು ಖಚಿತಗೊಂಡಿತ್ತು. lಈಚೆಗೆ ಹದಿನೈದು ದಿನಗಳಿಂದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸೆ.7 ಮತ್ತು 15 ರಂದು ಖಚಿತವಾಗಿದೆ.
‘ಸೆರೆ ಹಿಡಿಯಲು ಕ್ರಮ’
‘ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಎಂ.ಟಿ.ಪಲ್ಲಿ ಗ್ರಾಮದಲ್ಲಿನ ಹೆಜ್ಜೆ ಗುರುತಿರುವ ಸ್ಥಳಕ್ಕೆ ನಮ್ಮ ಸಿಬ್ಬಂದಿಯೊಡನೆ ನಾನೂ ತೆರಳಿ ಪರಿಶೀಲಿಸುತ್ತೇನೆ. ಮೇಲಧಿಕಾರಿಗಳಿಂದ ಅನುಮತಿ ಪಡೆದು, ಬೋನು ಅಳವಡಿಸುವ ಮತ್ತು ಚಿರತೆ ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯವನ್ನು ಆದ್ಯತೆಯಲ್ಲಿ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಬುರಾನೋದ್ಧೀನ್‌ ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.