ಯಾದಗಿರಿ: ‘ಕುಷ್ಠರೋಗವು ಹರಡುವ ಮುನ್ನವೇ ಸೂಕ್ತ ಮುನ್ನೆಚ್ಚರಿಕೆ ಹಾಗೂ ಅಗತ್ಯ ಚಿಕಿತ್ಸೆ ಪಡೆದರೆ ಗುಣಮುಖವಾಗುತ್ತದೆ’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಭಗವಂತ ಅನವರ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠರೋಗವು ವಾಸಿಯಾಗುವ ಸಾಮಾನ್ಯ ರೋಗವಾಗಿದೆ. ಭಯಪಡುವ ಅವಶ್ಯಕತೆಯಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಲಭ್ಯವಿದೆ ಎಂದರು.
ಮೈಕ್ರೋಬ್ಯಾಕ್ಟೀರಿಯಂ ಲೆಪ್ರಿ ಎನ್ನುವ ಸೂಕ್ಷ್ಮ ವೈರಾಣುವಿನಿಂದ ಈ ರೋಗ ಹರಡುತ್ತದೆ. ಮೈಮೆಲೆ ಸ್ಪರ್ಶದ ಅರಿವಿಲ್ಲದಂತೆ ತಿಳಿ ಬಿಳಿ-ತಾಮ್ರ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಅದನ್ನು ಕೂಡಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಗುಣಮುಖವಾಗಲಿದೆ ಎಂದರು.
ಡಾ.ವಸುಧಾ ಕುಲಕರ್ಣಿ ಅವರು ಸರ್ಕಾರಿ ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಅವುಗಳ ಲಾಭ ಪಡೆಯುವಂತೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದಪ್ಪ ಕಿಲಾರಿ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಬಸಪ್ಪ ಹೊಸಮನಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲೇಶ ಕುರುಕುಂದ, ಷಣ್ಮುಖ ಹೊಸಳ್ಳಿ, ವಿಶ್ವರಾಧ್ಯ ಬೇಲೂರು.ಸಮುದಾಯ ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ ಕುಂಬಾರ, ಮುಖಂಡರಾದ ಮಾನಯ್ಯ ಕೋರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಖಾ ಪೂಜಾರಿ, ಆಶಾ ಕಾರ್ಯಕರ್ತೆ ಶರಭಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಳಾ, ತಾಯಮ್ಮ, ಶಾಂಬಲಬಾಯಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.