ಸುರಪುರ: ‘ನಾನು ಮಂಜೂರು ಮಾಡಿಸಿ ಅಭಿವೃದ್ದಿ ಪಡಿಸಿದ ದೇವತ್ಕಲ್ ಶಾಲೆ ಆವರಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಸಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುವುದಕ್ಕೆ ಕಾಂಗ್ರೆಸ್ ಮುಖಂಡರಿಗೆ ನಾಚಿಕೆ ಬರಬೇಕು’ ಎಂದು ಶಾಸಕ ರಾಜೂಗೌಡ ಹರಿಹಾಯ್ದರು.
ತಾಲ್ಲೂಕಿನ ಶೆಳ್ಳಗಿ ಗ್ರಾಮದಲ್ಲಿ ಶನಿವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ ಬೋಗಸ್ ಕಾಮಗಾರಿ ಆಗಿದೆಯೆಂಬುದು ಸುಳ್ಳು ಆರೋಪ. ಯಾರ ಅವಧಿಯಲ್ಲಿ ಬೋಗಸ್ ಆಗಿದೆ. ಯಾರು ಎಷ್ಟು ಅನುದಾನ ತಂದಿದ್ದಾರೆ. ಅಭಿವೃದ್ದಿ ಯಾರ ಅವಧಿಯಲ್ಲಾಗಿವೆ ಅನ್ನುವುದಕ್ಕೆ ದಾಖಲೆಯೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಬೇಕಿದ್ದರೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.
‘ಮಾಜಿ ಸಚಿವ ಎಂ.ಬಿ. ಪಾಟೀಲರ ತಲೆ ಕೆಟ್ಟಿದೆ. ನನ್ನದಲ್ಲ. ಚುನಾವಣೆ ಹತ್ತಿರದಲಿದೆ. ಬೇಗ ಹೋಗಿ ಚೆಕ್ ಮಾಡಿಸಿಕೊಳ್ಳಿ, ಬೂದಿಹಾಳ ಪೀರಾಪುರ ಏತ ನೀರಾವರಿ ಬಗ್ಗೆ ನಮ್ಮ ಭಾಗಕ್ಕೆ ನಿವೇನು ಅನ್ಯಾಯ ಮಾಡಿದ್ದೀರಿ ಮತ್ತು ಫೇಸ್-2 ಹಾಗೂ ಸ್ಕಾಡಾ ಯಾರ ಅವಧಿಯಲ್ಲಿ ಮಂಜೂರಿ ಆಯಿತು ಅನ್ನುವುದನ್ನು ಅಧಿವೇಶನದಲ್ಲಿ ಉತ್ತರಿಸುತ್ತೇನೆ’ ಎಂದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ 50ಕ್ಕೂ ಹೆಚ್ಚು ಜನರಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಮುಖಂಡರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಸುರೇಶ ಸಜ್ಜನ್, ಎಚ್.ಸಿ. ಪಾಟೀಲ, ದೊಡ್ಡ ದೇಸಾಯಿ, ಶಂಕರ ನಾಯಕ, ಮಹೇಶ ಪಾಟೀಲ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.