ADVERTISEMENT

ಮೆಗಾ ಲೋಕ ಅದಾಲತ್: 1,378 ಪ್ರಕರಣಗಳ ಇತ್ಯರ್ಥ

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಮೆಗಾ ಲೋಕ ಅದಾಲತ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 16:30 IST
Last Updated 16 ಆಗಸ್ಟ್ 2021, 16:30 IST

ಯಾದಗಿರಿ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಿದ್ದ ಮೆಗಾ ಲೋಕ ಅದಾಲತ್‍ನಲ್ಲಿ ₹1.97 ಕೋಟಿ ಮೊತ್ತದ 1,378 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಮೆಗಾ ಲೋಕ್ ಅದಾಲತ್ ಜರುಗಿತ್ತು.

ಲೋಕ್ ಅದಾಲತ್‍ಗಾಗಿ ಯಾದಗಿರಿ, ಶಹಾಪುರ ಮತ್ತು ಸುರಪುರ ಸೇರಿದಂತೆ ಒಟ್ಟು 10 ಪೀಠಗಳನ್ನು ಸ್ಥಾಪಿಸಲಾಗಿತ್ತು.

ADVERTISEMENT

ವಿವಿಧ ರೀತಿಯ ಸುಮಾರು 4,046 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಲೋಕ್ ಆದಾಲತ್‍ಗಾಗಿ ತೆಗೆದುಕೊಂಡು ಅವುಗಳ ಪೈಕಿ 1,378 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಿ ಸುಮಾರು ₹ 1,97,43,549 ಮೊತ್ತ ಪರಿಹಾರ ಕೊಡಿಸಲಾಯಿತು. ಇವುಗಳಲ್ಲಿ 144 ವ್ಯಾಜ್ಯಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ₹48.33 ಲಕ್ಷ ಮೊತ್ತವನ್ನು ಇತ್ಯರ್ಥ ಮಾಡಲಾಗಿದೆ.

ಮೆಗಾ ಲೋಕ್ ಅದಾಲತ್‍ನಲ್ಲಿ 336 ಪ್ರಕರಣಗಳನ್ನು ವರ್ಚ್ಯೂಯಲ್ ಮಾದರಿಯಲ್ಲಿ ವಿಚಾರಣೆ ನಡೆಸಿ ಪರಿಹರಿಸಿ, ₹8,82,60 ಮೊತ್ತ ಇತ್ಯರ್ಥ ಮಾಡಲಾಯಿತು. 3,710 ಪ್ರಕರಣಗಳನ್ನು ಮೆಗಾ ಲೋಕ್ ಆದಾಲತ್‍ನಲ್ಲಿ ವಿಲೇವಾರಿ ಮಾಡಲಾಯಿತು.

ಮೆಗಾ ಲೋಕ್ ಅದಾಲತ್‍ನಲ್ಲಿ ಬಾಕಿ ಇರುವ ಬ್ಯಾಂಕ್ ವಸೂಲಾತಿ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಕಾರ್ಮಿಕ ಸಂಬಂಧಿತ ವಿವಾದಗಳು, ಸೆಕ್ಷನ್ 138 ಅಡಿ ದಾಖಲಾದ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಹಣ ವಸೂಲಾತಿ ಪ್ರಕರಣಗಳು, ಎಂಎಂಡಿಆರ್ ಕಾಯ್ದೆ ಪ್ರಕರಣಗಳು, ಜನನ ನೋಂದಣಿ ಪ್ರಕರಣಗಳು, ಪಾಲು ವಿಭಾಗ, ದಾವೆ ಹಾಗೂ ಸಿವಿಲ್ ಪ್ರಕರಣಗಳು, ಕಂದಾಯ ಪ್ರಕರಣಗಳು ಇನ್ನಿತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಹೀಲ್ ಅಹಮದ್ ಎಸ್. ಕುನ್ನಿಬಾವಿ ಇದ್ದರು. ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಲಯದ ಹಿರಿಯ ಮತ್ತು ಸಿವಿಲ್ ನ್ಯಾಯಾಧೀಶರು ಒಳಗೊಂಡಂತೆ ವ್ಯಾಜ್ಯಗಳ ವಿಲೇವಾರಿ ಕಾರ್ಯ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.