ಹುಣಸಗಿ: ತಾಲ್ಲೂಕಿನೆಲ್ಲೆಡೆ ಶುಕ್ರವಾರ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತಾಲ್ಲೂಕಿನಲ್ಲಿ ಅಂದಾಜು 30ಕ್ಕೂ ಹೆಚ್ಚು ಮನೆಗಳು ಭಾಗಶಃ ಬಿದ್ದಿದ್ದು, ಯಡಹಳ್ಳಿ ಒಂದೇ ಗ್ರಾಮದಲ್ಲಿ 11ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ನಾರಾಯಣಪುರ, ಮಾರನಾಳ ಮತ್ತಿತರ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದು, ಯಾವುದೇ ಜೀವ ಹಾನಿಯಾಗಿಲ್ಲ ಎಂದು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ತಿಳಿಸಿದರು.
ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೂ ನೀರು ನುಗ್ಗಿದ್ದ ರಿಂದಾಗಿ ಬೆಳೆಗಳು ಜಲಾವೃತವಾಗಿದ್ದು, ಸರ್ವೆ ಕಾರ್ಯದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು. ತಾಲ್ಲೂಕಿನ ಹೆಬ್ಬಾಳ.ಕೆ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯ ಹಿರೇ ಹಳ್ಳ ತುಂಬಿ ಹರಿಯುತ್ತಿದ್ದರಿಂದಾಗಿ ಸಂಚಾರ ಸ್ಥಗಿತಗೊಂಡಿದೆ.
ಗ್ರಾಮದ ದೇವಸ್ಥಾನದ ಬಳಿ ಇರುವ ಮನೆಗಳಿಗೂ ನೀರು ನುಗ್ಗಿದೆ ಎಂದು ಗ್ರಾಮದ ನಿಂಗು ಪಾಟೀಲ ಹೇಳಿದರು. ತಾಲ್ಲೂಕಿನ ದ್ಯಾಮನಹಾಳ ಗ್ರಾಮದ ಗುಡ್ಡದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಜಲಪಾತ ಸೃಷ್ಟಿಯಾಗಿದೆ.
ಶನಿವಾರ ಬೆಳಿಗ್ಗೆವರೆಗೂ ನಾರಾ ಯಣಪುರದಲ್ಲಿ 82 ಮಿ.ಮೀ., ಕೊಡೇಕಲ್ಲದಲ್ಲಿ 46ಮಿ.ಮೀ, ಹುಣಸಗಿ 52ಮಿ.ಮೀ ಮಳೆಯಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ಡ್ಯಾಂ ಡಿವಿಜನ್ ಮೂಲಗಳು ತಿಳಿಸಿವೆ. ಗುರುವಾರ 35 ಸಾವಿರ ಇದ್ದ ಒಳಹರಿವು ಶನಿವಾರ 98 ಸಾವಿರಕ್ಕೆ ಏರಿಕೆಯಾಗಿತ್ತು. ಸಂಜೆ ಹೊತ್ತಿಗೆ 1.40 ಲಕ್ಷ ಕ್ಯುಸೆಕ್ಗೆ ಏರಿಕೆಯಾಗಿದೆ ಎಂದು ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ತಿಳಿಸಿದರು.
ಜಲಾಶಯದ 23 ಮುಖ್ಯ ಕ್ರಷ್ಟ್ಗೇಟ್ ಮೂಲಕ 1.40 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.