ADVERTISEMENT

ಜನರ ಸೇವೆಗೆ ಶ್ರಮಿಸಿದ ಮುದ್ನಾಳ: ವಿಶ್ವಾರಾಧ್ಯ ಮಠದ ಡಾ.ಗಂಗಾಧರ ಸ್ವಾಮೀಜಿ

ದಿ.ವಿಶ್ವನಾಥರೆಡ್ಡಿ ಮುದ್ನಾಳ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 11:19 IST
Last Updated 27 ಡಿಸೆಂಬರ್ 2019, 11:19 IST
ಯಾದಗಿರಿಯ ಮುದ್ನಾಳ ಲೇಔಟ್‌ನಲ್ಲಿ ನಡೆದ ವಿಶ್ವನಾಥರೆಡ್ಡಿ ಮುದ್ನಾಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಗಂಗಾಧರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದರು
ಯಾದಗಿರಿಯ ಮುದ್ನಾಳ ಲೇಔಟ್‌ನಲ್ಲಿ ನಡೆದ ವಿಶ್ವನಾಥರೆಡ್ಡಿ ಮುದ್ನಾಳ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಗಂಗಾಧರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದರು   

ಯಾದಗಿರಿ: ‘ವ್ಯಕ್ತಿ ನಿಷ್ಠರಾಗಿರದೇ ತತ್ವ ನಿಷ್ಠರಾಗಿ ಜೀವಿಸಬೇಕು. ರಾಜಕಾರಣಿಗಳು ರಾಜಕಾರಣಿ ಗಳಾಗಿಯೇ ಉಳಿಯುತ್ತಾರೆ. ಆದರೆ, ವಿಶ್ವನಾಥರೆಡ್ಡಿ‌ ಅವರು ವ್ಯವಸ್ಥೆಯನ್ನು ಪರಿವರ್ತನೆಯ ಹಾದಿಗೆ ತರಲು ಪ್ರಯತ್ನಿಸಿದ್ದರು’ ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಡಾ.ಗಂಗಾಧರ ಸ್ವಾಮೀಜಿ ಹೇಳಿದರು.

ನಗರದ ಮುದ್ನಾಳ ಲೇಔಟ್‌ನಲ್ಲಿ ಮಾಜಿ ಸಚಿವ ದಿ.ವಿಶ್ವನಾಥರೆಡ್ಡಿ ಮುದ್ನಾಳ ಅವರ ಜನ್ಮ ದಿನಾಚರಣೆ ಹಾಗೂ ದಿ.ಚಂದ್ರಕಾಂತ ಕರದಳ್ಳಿ ಅವರು ರಚಿಸಿದ ವಿಶ್ವನಾಥರೆಡ್ಡಿ ಮುದ್ನಾಳರ ಜೀವನ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಮನೆ-ಮಠ ಮಾಡಿಕೊಳ್ಳುವ ರಾಜಕಾರಣಿಗಳ ಮಧ್ಯೆ ಅವೆಲ್ಲವನ್ನೂ ಮಾರಿಕೊಂಡ ಮುದ್ನಾಳರು,‌ ಶಾಸಕ, ಸಚಿವರರಾಗಿ ಪ್ರಮಾಣಿಕ ಮತ್ತು ನಿಷ್ಠಾವಂತರಾಗಿ ಕ್ಷೇತ್ರದ ಜನರ ಸೇವೆ, ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಂತಹ ರಾಜಕಾರಿಣಿಗಳು ಇಂದು ಸಿಗುವುದು ಅಪರೂಪವಾಗಿದೆ’ ಎಂದರು.

ADVERTISEMENT

‘ವಿಶ್ವನಾಥರೆಡ್ಡಿ ಮುದ್ನಾಳ ಅವರು ಒಂದು ಪಕ್ಷದ ವ್ಯಕ್ತಿಯಾಗಿರಲಿಲ್ಲ. ಎಲ್ಲರನ್ನೂ ನಮ್ಮವರಂತೆ ಕಂಡಿದ್ದಾರೆ. ಅವರು ತತ್ವಜ್ಞಾನಿಗಳಾಗಿ ಬಸವ ತತ್ವ ಪಾಲನೆ ಮಾಡಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಅವರ ಜೀವನ ಚರಿತ್ರೆಯನ್ನು ಸಾಹಿತಿ ಚಂದ್ರಕಾಂತ ಕರದಳ್ಳಿ ಅವರು ಬರೆದಿದ್ದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕ ಈಶ್ವರಯ್ಯ ಮಠ ಮಾತನಾಡಿ, ವೀರಶೈವ ವಿದ್ಯಾವರ್ಧಕ ಸಂಘದ ವಸತಿ ನಿಲಯ ಆರಂಭಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು’ ಎಂದರು.

ಹೆಡಗಿಮುದ್ರಾ ಮಠದ ಶಾಂತವೀರ ಸ್ವಾಮೀಜಿ, ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಡಾ.ವೀರಬಸವಂತರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಕಾಂಗ್ರೆಸ್ ಮುಖಂಡ ಸದಾಶೀವಪ್ಪ ರೊಟ್ನಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.