ADVERTISEMENT

ಮಾವು ಬೆಳೆಗಾರರ ಮೇಲೆ ‘ಲಾಕ್‌ಡೌನ್’ ಕರಿನೆರಳು

ಯಾದಗಿರಿ ಜಿಲ್ಲೆಯಲ್ಲಿ 153 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ; ಉತ್ತಮ ಇಳುವರಿ ನಿರೀಕ್ಷೆ

ಟಿ.ನಾಗೇಂದ್ರ
Published 27 ಏಪ್ರಿಲ್ 2021, 3:55 IST
Last Updated 27 ಏಪ್ರಿಲ್ 2021, 3:55 IST
ಶಹಾಪುರ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಬೆಳೆದಿರುವ ಮಾವು
ಶಹಾಪುರ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಬೆಳೆದಿರುವ ಮಾವು   

ಶಹಾಪುರ: ‘ಹಣ್ಣುಗಳ ರಾಜ’ ಮಾವು ಈಗ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿರುವಂತೆ ಕೊರೊನಾ ಸೋಂಕು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಹೇರುತ್ತಿರುವ ಲಾಕ್‌ಡೌನ್ ಭೀತಿಯಿಂದ ಧಾರಣೆ ಕುಸಿತ ಉಂಟಾಗುವ ಭೀತಿ ರೈತರಿಗೆ ಶುರುವಾಗಿದೆ.

ಜಿಲ್ಲೆಯ ಮಾವು ಮೇ ಮೊದಲ ಅಥವಾ ಎರಡನೇ ವಾರ ಮಾರುಕಟ್ಟೆಗೆ ಬರುತ್ತದೆ. ಈ ಅವಧಿಯಲ್ಲಿಯೇ ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಕೊರೊನಾ ಕರಿನೆರಳು ಮಾವು ಬೆಳೆಗಾರರ ಮೇಲೆ ಆವರಿಸುವ ಸಾಧ್ಯತೆ ದಟ್ಟವಾಗಿದೆ.

ಪ್ರಸಕ್ತ ಬಾರಿ ಉತ್ತಮ ಫಸಲು ಬಂದಿದ್ದು, ಮರದಿಂದ ಕಾಯಿ ಕೀಳಿ ಮಂಡಿಗೆ ಹಾಕಿ ಮಾರಾಟ ಮಾಡಲು ಸಿದ್ಧತೆ ನಡೆದಿದೆ. ಬೆರಳೆಣಿಗೆ ದಿನದಲ್ಲಿ ಮಾವು ಮಾರುಕಟ್ಟೆಗೆ ಆಗಮಿಸುತ್ತಿರುವಂತೆ ಲಾಕ್‌ಡೌನ್‌ನಿಂದ ಖರೀದಿಗೂ ಹಾಗೂ ಬೇರೆಡೆ ಸಾಗಣೆ ಮಾಡಲು ತೊಡಕಾಗುವ ಸಾಧ್ಯತೆ ಇದೆ. ಇದರಿಂದ ಧಾರಣೆ ಕುಸಿತವಾಗಲಿದೆ. ಅಲ್ಲದೆ ಹಣ್ಣು ಆದ ಕೆಲ ದಿನದಲ್ಲಿ ಅದು ಮಾರಾಟ ಮಾಡಬೇಕು ಇಲ್ಲದೆ ಹೋದರೆ ಕೊಳೆತುಬಿಡುತ್ತದೆ. ನಮಗೆ ಮತ್ತೊಂದು ಹೊಡೆತ ಬಿಳುತ್ತದೆ ಎನ್ನುತ್ತಾರೆ ರೈತ ಶರಣಪ್ಪ.

ADVERTISEMENT

ಅಲ್ಲದೆ ಈಗ ಮುಸ್ಲಿಂ ಸಮಾಜದವರು ರಂಜಾನ್‌ನಲ್ಲಿ ಪ್ರಾರ್ಥನೆ ಮುಗಿದ ಬಳಿಕ ಹಣ್ಣು ಖರೀದಿಸಿ ಸೇವನೆ ಮಾಡುತ್ತಾರೆ. ಇದರಿಂದ ಹಣ್ಣಿಗೆ ಉತ್ತಮ ಧಾರಣೆ ಸಿಗುವ ಭರವಸೆಯಿತ್ತು. ಲಾಕ್‌ಡೌನ್‌ನಿಂದ ಮಾರಾಟದ ಸಮಸ್ಯೆಯಾಗುವುದು ಜೊತೆಗೆ ಹಣ್ಣು ಖರೀದಿಸಲು ಗ್ರಾಹಕರು ಹಿಂದೇಟು ಹಾಕುವರು. ಸರ್ಕಾರ ಮಧ್ಯ ಪ್ರವೇಶಿಸಿ ಮಾವು ಮಾರಾಟ ಮಾಡಲು ಮತ್ತು ಸಾಗಣೆ ಮಾಡಲು ಸೂಕ್ತ ಅವಕಾಶ ನೀಡಬೇಕು ಎಂದು ಮಾವು ಬೆಳೆದ ರೈತರು ಮನವಿ ಮಾಡಿದ್ದಾರೆ.

ಸ್ಥಳೀಯವಾಗಿ ದೊರೆಯುವ ಮಾವಿನ ತಳಿಯ ಹಣ್ಣಿನ ಬೆಲೆ ಕೆ.ಜಿಗೆ ₹100ರಿಂದ 120 ಇದೆ. ಇನ್ನು ಬೇರೆ ಕಡೆಯಿಂದ ಮಾರುಕಟ್ಟೆಗೆ ಹಣ್ಣು ಬಂದಿಲ್ಲ. ಲಾಕ್‌ಡೌನ್‌ನಿಂದ ಹಣ್ಣು ಮಾರಾಟಕ್ಕೆ ತೊಂದರೆಯಾಗಲಿದೆ. ಸರ್ಕಾರ ನೆರವಿಗೆ ಬರಬೇಕು ಎಂದು ಮಾವು ಬೆಳೆಗಾರರು ಆಗ್ರಹಿಸಿದ್ದಾರೆ.

ಧಾರಣೆ ಕುಸಿತ ಭೀತಿ
ಲೆಯಲ್ಲಿ 153 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಈ ಬಾರಿ ಹೆಕ್ಟೇರ್‌ಗೆ 9ರಿಂದ 10 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ. ಆದರೆ ಲಾಕ್‌ಡೌನ್‌ನಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ದಶೇಹ, ದಶೇಹರಿ ತಳಿಗಳನ್ನು ಹೆಚ್ಚಾಗಿ ಬೆಳೆದಿದ್ದು, ಕೆಲವು ರೈತರು ಮಲ್ಲಿಕಾ, ಕೇಸರಿ ತಳಿಗಳನ್ನು ಬೆಳೆದಿದ್ದಾರೆ. ಇಲ್ಲಿನ ಮಾವಿನ ಹಣ್ಣುಗಳನ್ನು ಹೈದರಾಬಾದ್‌, ಸೊಲ್ಲಾಪುರ, ಬೆಂಗಳೂರು, ಕಲಬುರ್ಗಿ, ರಾಯಚೂರು ನಗರಗಳಿಗೆ ಕಳುಹಿಸಲಾಗುತ್ತಿತ್ತು.

ಕಳೆದ ವರ್ಷ ಕ್ವಿಂಟಲ್‌ಗೆ 3ರಿಂದ 4 ಕ್ವಿಂಟಲ್ ಮಾವಿನ ಇಳುವರಿ ಬಂದಿತ್ತು. ಆದರೆ ಲಾಕ್‌ಡೌನ್ ಕಾರಣ ಬೆಳೆಗಾರರು ನಷ್ಟ ಅನುಭವಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಇಳುವರಿ ಬಂದಿದೆ. ಆದರೆ ಸರ್ಕಾರ ಲಾಕ್‌ಡೌನ್ ಹೇರುತ್ತಿರುವ ಕಾರಣ ಧಾರಣೆ ಕುಸಿತವಾಗುವ ಸಾಧ್ಯತೆ ಇದ್ದು, ಮತ್ತೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.