ಯರಗೋಳ: ಹತ್ತಿಕುಣಿ ಹೋಬಳಿ ವ್ಯಾಪ್ತಿಯ ತಾಂಡಾ ಮತ್ತು ಗ್ರಾಮಗಳಲ್ಲಿ ಕೋವಿಡ್– 19 ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನರು ಮಾತ್ರ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ತಿರುಗಾಡುತ್ತಿದ್ದಾರೆ.
ಯರಗೋಳ ಗ್ರಾಮದ ಮಾರಕಟ್ಟೆಗೆ ಬಹಳಷ್ಟು ಜನರು ಮಾಸ್ಕ್ ಧರಿಸದೆ ಬರುತ್ತಿದ್ದಾರೆ. ಬೇಕರಿ, ಹಿಟ್ಟಿನ ಗಿರಣಿ, ಕ್ಷೌರದಂಗಡಿ, ಔಷಧ ಅಂಗಡಿ, ತರಕಾರಿ ಅಂಗಡಿ ಸೇರಿದಂತೆ ಹಲವು ಕಡೆ ಜನರು ಅಂತರ ಕಾಪಾಡದೇ ವ್ಯವಹರಿಸುತ್ತಿದ್ದಾರೆ. ತಾಂಡಾಗಳಿಂದ ಗ್ರಾಮಕ್ಕೆ ಪ್ರಯಾಣಿಕರನ್ನು ಕರೆತರುವ ಆಟೊ ಮತ್ತು ಟಂಟಂ ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ಆಸನಗಳಿಗಿಂತಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕರೆತರುತ್ತಿದ್ದಾರೆ.
ಯರಗೋಳ ಸುತ್ತಲಿನ ಅಲ್ಲಿಪುರ ಸಣ್ಣ ತಾಂಡಾ, ವೆಂಕಟೇಶನಗರ, ಕೇಮುನಾಯಕ ತಾಂಡಾ, ಥಾವರುನಾಯಕ ತಾಂಡಾ, ಕ್ಯಾಸಪನಳ್ಳಿ ತಾಂಡಾಗಳನ್ನು ಜಿಲ್ಲಾಡಾಳಿತ ಕಂಟೇನ್ಮೇಂಟ್ ಝೋನ್ಗಳೆಂದು ಗುರುತಿಸಿ, ಆ ಊರುಗಳ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಆದರೂ ಸೀಲ್ಡೌನ್ ಆದ ಪ್ರದೇಶಗಳ ಜನರು ಮನೆಯಲ್ಲಿರದೇ ಹೊರಗಡೆ ಓಡಾಡುತ್ತಾ ಭೀತಿ ಉಂಟು ಮಾಡುತ್ತಿದ್ದಾರೆ.
ಗ್ರಾಮದ ಕಿರಾಣಿ ವ್ಯಾಪಾರಿ ಶಿವರಾಜ ಮಾನೆಗಾರ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರೂ ಜನರು ಪಾಲಿಸುತ್ತಿಲ್ಲ. ಸೀಲ್ಡೌನ್ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.