ಯಾದಗಿರಿ: ರಸ್ತೆ ಮೇಲೆ ಕಸ ಹಾಕಿದ್ದ ಪಿಡಬ್ಲ್ಯೂಡಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ ಅವರು ಅಧಿಕಾರಿಗೆ ದಂಡ ಹಾಕಿ ಮತ್ತೊಮ್ಮೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆ ವನಮಹೋತ್ಸವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ನಗರದ ಸುಭಾಶ್ಚಂದ್ರ ಬೋಸ್ ವೃತ್ತದ ಬಳಿ ಇರುವ ಪಿಡಬ್ಲ್ಯೂಡಿ ಇಲಾಖೆ ಕಚೇರಿಯ ಬಳಿ ಇಲಾಖೆಯ ಸಿಬ್ಬಂದಿ ಮುಖ್ಯರಸ್ತೆ ಮೇಲೆ ಕಸದ ಗುಡ್ಡೆ ಹಾಕಿದ್ದನ್ನು ಗಮನಿಸಿದ ಅಧ್ಯಕ್ಷರು, ಕಚೇರಿ ಸಿಬ್ಬಂದಿಗೆ ಕಸ ರಸ್ತೆ ಮೇಲೆ ಹಾಕದಂತೆ ಎಚ್ಚರಿಕೆ ನೀಡಿ ತೆರಳಿದ್ದರು.
ಕಾರ್ಯಕ್ರಮ ಮುಗಿದ ಮೇಲೆ ಮತ್ತೇ ಅದೇ ಮುಖ್ಯರಸ್ತೆ ಮೇಲೆ ಬರುವಾಗಲೂ ಕಸ ಹಾಗೇಯೇ ಇರುವುದರಿಂದ ಕಾರಿನಿಂದ ಕೆಳಗಿಳಿದ ನಗರಸಭೆ ಅಧ್ಯಕ್ಷರು ಅಧಿಕಾರಿಗಳನ್ನು ಕರೆಯಿಸಿ, ನಗರಸಭೆ ಸಿಬ್ಬಂದಿಗೆ ಕರೆಯಿಸಿ ಪಿಡಬ್ಲ್ಯೂಡಿ ಅಧಿಕಾರಿಗೆ ದಂಡ ಹಾಕುವಂತೆ ಸೂಚಿಸಿದರು.
ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ಪಿಡಬ್ಲ್ಯೂಡಿ ಅಧಿಕಾರಿಗೆ ₹200 ದಂಡ ರಸೀದಿ ನೀಡಿ ಮತ್ತೊಮ್ಮೆ ರಸ್ತೆ ಮೇಲೆ ಕಸ ಸುರಿಯದಂತೆ ಸೂಚನೆ ನೀಡಿದರು.
ಸ್ಥಳದಲ್ಲಿಯೇ ದಂಡ ಪಾವತಿಸಿದ ಅಧಿಕಾರಿ ನಗರಸಭೆ ಅಧ್ಯಕ್ಷರಿಗೆ ಕ್ಷಮೆ ಕೋರಿ ಮತ್ತೊಮ್ಮೆ ಈ ರೀತಿ ತಪ್ಪು ಮಾಡುವುದಿಲ್ಲವೆಂದರು.
ಈ ಸಂದರ್ಭದಲ್ಲಿ ನಗರಸಭೆ ಕಾನೂನು ಸಲಹೆಗಾರರಾದ ಶರಣಗೌಡ ಬಲಕಲ್, ಅಧಿಕಾರಿ ಶಿವಪುತ್ರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ರಸ್ತೆ ಮೇಲೆ ಕಸ ಹಾಕಿದರೆ ದಂಡ ಗ್ಯಾರಂಟಿ
ಸ್ವಚ್ಛ ಯಾದಗಿರಿ ನಗರಕ್ಕಾಗಿ ಪಣತೊಟ್ಟಿದ್ದೇವೆ. ಅದಕ್ಕಾಗಿ ಕಸ ಕಂಡಲ್ಲಿ ಫೋಟೋ ಕಳಿಸಿ ಎಂಬ ಅಭಿಯಾನ ಮಾಡುತ್ತಿದ್ದೇವೆ. ಫೋಟೋ ಬಂದ ತಕ್ಷಣ ಅಲ್ಲಿ ನಮ್ಮ ನಗರಸಭೆ ಸಿಬ್ಬಂದಿ ಹಾಜರಾಗಿ ಅಲ್ಲಿನ ಕಸವನ್ನು ವಿಲೇವಾರಿ ಮಾಡಿ ಸ್ವಚ್ಛ ನಗರ ನಿರ್ಮಾಣ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ. ಇದನ್ನು ಮರೆತು ಯಾರಾದರೂ ರಸ್ತೆ ಮೇಲೆ ಕಸ ಹಾಕಿದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ದಂಡ ಹಾಕುವುದರ ಜೊತೆಗೆ ಯಾವುದಾದರೂ ಇಲಾಖೆ ಅಥವಾ ಸಂಸ್ಥೆಯವರು ರಸ್ತೆ ಮೇಲೆ ಕಸ ಹಾಕಿದಲ್ಲಿ ಶಿಸ್ತುಕ್ರಮಕ್ಕಾಗಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.