ADVERTISEMENT

‘ಅಂತರ್ಜಾಲ ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಿ’

ಹಿಂದುಳಿದವರ್ಗ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 14:11 IST
Last Updated 31 ಡಿಸೆಂಬರ್ 2019, 14:11 IST
ಯಾದಗಿರಿಯ ಜಿಲ್ಲಾಡಳಿತ ಭವನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ನಳಿನ್‌ ಅತುಲ್‌ ಮಾತನಾಡಿದರು
ಯಾದಗಿರಿಯ ಜಿಲ್ಲಾಡಳಿತ ಭವನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ನಳಿನ್‌ ಅತುಲ್‌ ಮಾತನಾಡಿದರು   

ಯಾದಗಿರಿ: ‘ಐಎಎಸ್, ಕೆಎಎಸ್, ಬ್ಯಾಂಕಿಂಗ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನವೆಂಬುದು ಪುಸ್ತಕದ ಮುಖಪುಟ ಅಥವಾ ವೆಬ್‍ಸೈಟ್ ಲಿಂಕ್ ಇದ್ದಂತೆ. ಅಭ್ಯರ್ಥಿಗಳೇ ಸ್ವತಃ ಲಿಂಕ್ ಕ್ಲಿಕ್ ಮಾಡಿ ಅಭ್ಯಾಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಲು ಅಭ್ಯರ್ಥಿಗಳು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಅಂಗೈನಲ್ಲೇ ಜಗತ್ತು ಇದೆ. ಅಂತರ್ಜಾಲದಲ್ಲಿ ಎಲ್ಲ ವಿಷಯಗಳು ಸಿಗುತ್ತವೆ. ಆದರೆ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವಿರಬೇಕು. ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮವನ್ನು ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಿ. ಪರೀಕ್ಷೆಗಳ ತಯಾರಿಗೆ ಆಸಕ್ತಿ ಮತ್ತು ಸಾಮರ್ಥ್ಯ ಇರುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಂತೆ’ ಸಲಹೆ ನೀಡಿದರು.

ADVERTISEMENT

‘ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು. ಅದರಲ್ಲಿ ಮುಖ್ಯವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಬೇಕು. ಎಲ್ಲ ಪುಸ್ತಕಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ, ಗ್ರಂಥಾಲಯಗಳಿಗೆ ಹೋಗಿ ಅಭ್ಯಾಸ ಮಾಡಬೇಕು. ಪಠ್ಯದ ಜೊತೆಗೆ ಮಹಾತ್ಮ ಗಾಂಧಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಂತಹ ಮಹನೀಯರ ಜೀವನ ಚರಿತ್ರೆ ಓದಬೇಕು’ ಎಂದರು.

ಕಲಬುರ್ಗಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ಓದಬೇಕು. ಅಲ್ಲಿ ಸಂವಿಧಾನದ ಇಡೀ ಮೌಲ್ಯವನ್ನು ತಿಳಿಸಿಕೊಡಲಾಗಿದೆ. ಇದನ್ನು ಪರೀಕ್ಷೆಗಾಗಿ ಓದದೇ ಅರ್ಥೈಸಿಕೊಳ್ಳಬೇಕು. ಇದರ ಪ್ರತಿ ಶಬ್ದವನ್ನು ಬಾಯಿಪಾಠ ಮಾಡಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಮಾತನಾಡಿ, ‘ಕುಟುಂಬ ಅಥವಾ ಸಂಬಂಧಿಕರಲ್ಲಿ ಯಾರೊ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಐಎಎಸ್, ಕೆಎಎಸ್, ಪರೀಕ್ಷೆ ಬರೆಯಬಾರದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮೊದಲು ಮನಸ್ಸಿನಿಂದ ಸಿದ್ಧವಾಗಬೇಕು. ಕಲಿಯುವ ಛಲವಿದ್ದರೆ ಪರೀಕ್ಷೆಯಲ್ಲಿ ಭಾಷೆ ಅಡ್ಡಿಯಾಗುವುದಿಲ್ಲ. ಮಾತೃಭಾಷೆಯಲ್ಲಿಯೇ ಓದಿ ಉನ್ನತ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿದ್ದಾರೆ. ನಿತ್ಯ ಇಂಗ್ಲಿಷ್ ದಿನಪತ್ರಿಕೆ, ಶಬ್ದಕೋಶ ಓದಬೇಕು. ಆತ್ಮವಿಶ್ವಾಸ, ದೃಢಸಂಕಲ್ಪ ಮಾಡಿದರೆ ಎಲ್ಲ ಭಾಷೆ ಕಲಿಯಬಹುದು’ ಎಂದರು.

ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ವೆಂಕಟೇಶ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ರೇವಣ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ಸಾಬಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.