ಯಾದಗಿರಿ: ‘ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂದರ್ಭದಲ್ಲಿ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ.ಇದರ ಹಿಂದೆ ಸ್ವಪಕ್ಷದ ‘ನಾಯಕ’ನ ಕೈವಾಡವಿದೆ’ ಎಂದು ಸುರಪುರದ ಶಾಸಕ ರಾಜೂಗೌಡ ಆರೋಪಿಸಿದ್ದಾರೆ.
‘ನಾನು ಆ ನಾಯಕನ ಕೈವಾಡವನ್ನು ಸಹಿಸುವುದಿಲ್ಲ. ನನಗೆ ಹೊರಗಿನ ಶತ್ರುಗಳು ಇಲ್ಲ. ಒಳಗಿನ ಶತ್ರುಗಳಿದ್ದಾರೆ. ನಾನು ಸಚಿವನಾಗಲು ಬಯಸಿದ್ದು ನಿಜ. ಆದರೆ, ಇಲ್ಲಸಲ್ಲದ ಆಡಿಯೊ ವೈರಲ್ ಮಾಡಿ ನನಗೆ ಕೆಟ್ಟ ಹೆಸರು ತರಲಾಗುತ್ತಿದೆ. ತಾಕತ್ ಇದ್ದರೆ, ನನ್ನ ಎದುರಿಗೆ ಸೆಣಸಾಡಿ. ಬೆನ್ನಿಗೆ ಚೂರಿ ಹಾಕಬೇಡಿ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರು ಮಾತನಾಡಿದ ಅಡಿಯೊದಲ್ಲಿ ನನ್ನ ಹೆಸರು ದುರ್ಬಳಕೆ ಮಾಡಲಾಗಿದೆ. ಆಕೆ ಯಾರು ಎಂಬುದು ನನಗೆ ಗೊತ್ತಿಲ್ಲ. ಕೆಲಸ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ. ನಾನೂ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹಿಳೆಯಿಂದ ಅನ್ಯಾಯಕ್ಕೆ ಒಳಗಾದವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.