ಗುರುಮಠಕಲ್: ಕಳೆದ ಬುಧವಾರ (ಫೆಬ್ರುವರಿ 8) ಸಂಭ್ರಮದಲ್ಲಿ ಮಿಂದೆದ್ದ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಈಗ ಸ್ಮಶಾನ ಮೌನ ಮನೆ ಆವರಿಸಿದೆ. ಇಬ್ಬರ ಸಾವಿನಿಂದ ಮತ್ತು ವಾಂತಿ ಭೇದಿ ಪ್ರಕರಣದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬಹುತೇಕ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಾವಿತ್ರಮ್ಮ ವೆಂಕಟಪ್ಪ ನಕ್ಕ (35) ಅವರಿಗೆ ಮಂಗಳವಾರ ಬೆಳಿಗ್ಗೆ 5ರ ಸುಮಾರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಬೆಳಿಗ್ಗೆ 7.30ರ ವೇಳೆಗೆ ನೆರೆಯ ನಾರಾಯಣಪೇಟ್ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಕೂಡಲೇ ಹೈದರಾಬಾದ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದು, ಮಾರ್ಗ ಮಧ್ಯ ತೆಲಂಗಾಣದ ಮಹಬೂಬನಗರ ನಗರದ ಬಳಿ ಸಾವಿತ್ರಮ್ಮ ಮೃತಪಟ್ಟಿದ್ದಾರೆ.
ಅವರಿಗೆ ಪತಿ, 13 ಮತ್ತು 14 ವರ್ಷದ ಪುತ್ರರು, 16 ಮತ್ತು 18 ವರ್ಷದ ಪುತ್ರಿಯರಿದ್ದಾರೆ. ಕುಟುಂಬ ಸದಸ್ಯರ ರೋದನೆ ಮುಗಿಲು
ಮುಟ್ಟಿತ್ತು.
ಬುಧವಾರ ಬೆಳಿಗ್ಗೆ ಮನೆಯಲ್ಲಿ ಅಡುಗೆ ಮಾಡಿ, ಊಟ ಮಾಡಿದ್ದ ಸಾಯಮ್ಮ ಮಿನಾಸಪುರಂ(72) ಅವರಿಗೆ ಮದ್ಯಾಹ್ನದ ವೇಳೆಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರು ಮೃತಪಟ್ಟಿದ್ದಾರೆ. ಅವರ ಕುಟುಂಬವು ಆಘಾತಕ್ಕೆ ಒಳಗಾಗಿದೆ.
ಹಿನ್ನಲೆ: ಗ್ರಾಮದ ಅಲ್ಲಾವುದ್ಧೀನ್ ದರ್ಗಾದ ವಾರ್ಷಿಕ ಜಾತ್ರೆ (ಉರುಸ್) ಕಳೆದ ಬುಧವಾರ (ಫೆ.8)ರಿಂದ ಶುಕ್ರವಾರ (ಫೆ.10)ವರೆಗೆ ನಡೆದಿತ್ತು. ಬಳಿಕ ನೆರೆಯ ತೆಲಂಗಾಣದ ಜಲಾಲಪುರ ಕ್ರಾಸ್ ಹತ್ತಿರ ಫೆಬ್ರುವರಿ 13 ಮತ್ತು 14ರಂದು ಜಾತ್ರೆ ನಡೆದಿದ್ದು, ಎರಡೂ ಉತ್ಸವಗಳಲ್ಲಿ ಭಾಗವಹಿಸಿದ್ದ ಜನ ಮಾಂಸಾಹಾರ
ಸೇವಿಸಿದ್ದರು.
ಭಾನುವಾರ ಗ್ರಾಮದಲ್ಲಿ ಒಂದಿಬ್ಬರಿಗೆ ಭೇದಿಯಾಗಿದ್ದು ಚಿಕಿತ್ಸೆ ಪಡೆದಿದ್ದರು. ಬುಧವಾರದ ವೇಳೆಗೆ ಗ್ರಾಮದ 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಗಳು ಹೆಚ್ಚುವ
ಸಾಧ್ಯತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.