ADVERTISEMENT

ಅನಪುರ: ಭಯದ ನೆರಳಲ್ಲಿ ಗ್ರಾಮಸ್ಥರು

ಗ್ರಾಮಕ್ಕೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಭೇಟಿ; ನೀರಿನ ಶುದ್ಧತೆ ಪರಿಶೀಲನೆ

ಎಂ.ಪಿ.ಚಪೆಟ್ಲಾ
Published 17 ಫೆಬ್ರುವರಿ 2023, 5:33 IST
Last Updated 17 ಫೆಬ್ರುವರಿ 2023, 5:33 IST
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಮತ್ತು ಅಧಿಕಾರಿಗಳು ಭೇಟಿ ನೀಡದರು
ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಮತ್ತು ಅಧಿಕಾರಿಗಳು ಭೇಟಿ ನೀಡದರು   

ಗುರುಮಠಕಲ್: ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಭಾನುವಾರದಿಂದ (ಫೆ.12) ಗುರುವಾರದವರೆಗೆ 66ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಕಾಣಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಆವರಿಸಿದೆ. ಗ್ರಾಮದ ನಿವಾಸಿ ನರಸಮ್ಮ ಯಲ್ಲಪ್ಪ ಎಂಬುವರ ಸಾವಿನೊಂದಿಗೆ ಮೃತರ ಸಂಖ್ಯೆ 3ಕ್ಕೆ ಏರಿದೆ.

ರಾಯಚೂರಿನಲ್ಲಿ–7, ತೆಲಂಗಾಣದ ನಾರಾಯಣಪೇಟ್‌–12, ಅನಪುರ ಚಿಕಿತ್ಸಾ ಕೇಂದ್ರ–8, ಯಾದಗಿರಿ ಜಿಲ್ಲಾ ಆಸ್ಪತ್ರೆ–33 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಗುರುವಾರ 19 ಜನ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಾಹಿಲ್ ಅಹಮದ್ ಕುನ್ನಿಬಾವಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಮರೇಶ ನಾಯ್ಕ, ಲೋಕಾಯುಕ್ತ ಡಿಎಸ್ಪಿ, ಜಿಲ್ಲಾ ಆರೋಗ್ಯ ಮತ್ತು ಉಟುಂಬ ಕಲ್ಯಾಣಾಧಿಕಾರಿ, ಅಬಕಾರಿ ಅಧಿಕಾರಿಗಳು ಸೇರಿ ವಿವಿದ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಅನಪುರದ ಉಪ ಆರೋಗ್ಯ ಕೇಂದ್ರದಿಂದ ಚಿಕಿತ್ಸೆಗಾಗಿ 10 ಜನರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

‘ನರಸಮ್ಮ ಅವರ ಇಬ್ಬರೂ ಪುತ್ರರು ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದು, ಸದ್ಯ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳಿದ್ದಾರೆ. ‘ಮಂಗಳವಾರ ಅತ್ತೆ ನರಸಮ್ಮ ಅವರ ಚಿಕಿತ್ಸೆಗೆಂದು ಯಾದಗಿರಿಗೆ ತೆರಳಿದ್ದೆವು. ಬುಧವಾರ ರಾತ್ರಿ ಅವರು ತೀರಿಕೊಂಡರು’ ಎಂದು ಮೃತರ ಸೊಸೆ ಶಾಂತಮ್ಮ ತಿಳಿಸಿದರು.

ನರಸಮ್ಮ ಅವರ ಮೊಮ್ಮಗಳು ಉಷಾ ಗುರುವಾರ ಸಂಜೆ ವೇಳೆ ವಾಂತಿ ಮಾಡಿಕೊಂಡಿದ್ದು, ಅವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಆಕೆಗೆ ತಕ್ಷಣವೇ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.