ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಗುಡ್ಡದ ಈದ್ಗಾ ಮೈದಾನ ಬಳಿ ಜಮಾಯಿಸಿದ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ಗಂಜ್ ಪ್ರದೇಶ, ಹಳೆ ಬಸ್ ನಿಲ್ದಾಣ ಬಳಿ ಇರುವ ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರಾರ್ಥನೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವಿಶೇಷ ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಇದಕ್ಕೂ ಮುನ್ನ ನಗರದ ವಿವಿಧ ಮಸೀದಿಗಳಲ್ಲಿ ಈದ್ನ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಹೊಸ ಬಟ್ಟೆ ತೊಟ್ಟ ಚಿಣ್ಣರು ಗಮನ ಸೆಳೆದರು. ಈದ್ಗಾ ಮೈದಾನ ಬಳಿ ‘ಇತಾರ್’ ಎನ್ನುವ ವಿಶೇಷ ಸುಗಂಧ ದ್ರವ್ಯ ಮೂಗಿಗೆ ಬಡಿಯುತ್ತಿತ್ತು.
ಒಂದು ತಿಂಗಳು ಕಾಲ ಉಪವಾಸ ವ್ರತ ಕೈಗೊಂಡ ಮುಸ್ಲಿಮರು ಬುಧವಾರ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ಬೇರೆ ಸಮುದಾಯದವರನ್ನು ಊಟಕ್ಕೆ ಆಹ್ವಾನಿಸಿ ಹಬ್ಬದ ಆಚರಣೆಗೆ ಮೆರಗು ತಂದರು.
‘ದೇಶದಲ್ಲಿ ಮಳೆ ಸಮೃದ್ಧಿಯಾಗಿ ಸುರಿಯಲಿ. ಪ್ರಾಣಿ, ಪಕ್ಷಿಗಳು ನೀರಿಲ್ಲದೇ ಪರದಾಡುತ್ತಿದ್ದಾವೆ. ಹೀಗಾಗಿ ಶೀಘ್ರ ಮಳೆಯಾಗಲಿ ಪ್ರಾರ್ಥನೆ ಸಲ್ಲಿಸಲಾಯಿತು’ ಎಂದು ಈದ್ಗಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಮನಸ್ಸೂರ ಅಹ್ಮದ್ ಆಫ್ಘಾನಿ ಹೇಳಿದರು.
ಧರ್ಮಗುರುಗಳಾದ ಖಾಜಿ ಮಹ್ಮದ್ ಸಿದ್ಧಿಕಿ, ಗೌಸ್ ಮೂಸಾ ಈದ್ಗಾ ಮೈದಾನ ಬಳಿ ಧರ್ಮಭೋದನೆ ಮಾಡಿದರು.
ಈದ್ಗಾ ಮೈದಾನ ಬಳಿ ನಗರಸಭೆ ವತಿಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಮಾಜ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಈದ್ಗಾ ಮೈದಾನ ಬಳಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಿಎಸ್ಐ–1, ಎಎಸ್ಐ–2, ಮುಖ್ಯಪೇದೆ–2, ಪೊಲೀಸ್ ಕಾನ್ಸ್ಟೇಬಲ್–3, ಗೃಹರಕ್ಷಕ ದಳ–2 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.