ಸೈದಾಪುರ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಸಮೀಪದ ಮಾಧ್ವಾರ ಗ್ರಾಮದ ಮಲ್ಲಪ್ಪ ಮೇಸ್ತ್ರಿ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿ ಸಮೀಪದ ಕಾಳಹಸ್ತಿಯಲ್ಲಿ ಆರ್ಸಿಬಿ ತಂಡದ ಆಟಗಾರರ ಫೊಟೋ ಹಿಡಿದು ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಮಾಡಿಸಲಾಯಿತು.
ಕಳೆದ ಒಂದು ದಶಕದಿಂದ ಟ್ರೋಫಿ ಪಡೆಯುವಲ್ಲಿ ವಿಫಲವಾಗುತ್ತಿರುವ ಆರ್ಸಿಬಿ ತಂಡದ ಆಟಗಾರರು ದೋಷ ಮುಕ್ತರಾಗಿ ಈ ಬಾರಿ ಚಾಂಪಿಯನ್ ಪಟ್ಟ ಪಡೆಯಬೇಕು ಎಂದು ಹರಕೆ ಹೊತ್ತು ಪ್ರಾರ್ಥನೆ ಸಲ್ಲಿಸಿದರು. ತದನಂತರ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಆಟಗಾರರ ಫೊಟೋ ಹಿಡಿದು ಈ ಬಾರಿಯ ಕಪ್ ಕರ್ನಾಟಕಕ್ಕೆ ಬರಲಿ, ಕನ್ನಡಿಗರಿಗೆ ಸಿಗಲಿ, ದಶಕದ ನಮ್ಮ ಕನಸು ನನಸಾಗಲಿ ಎಂದು ಭಗವಂತನಲ್ಲಿ ಬೇಡಿಕೊಂಡರು.
ಈ ಸಂದರ್ಭದಲ್ಲಿ ಕೆ.ಬಿ ರಾಘವೇಂದ್ರ ಸೈದಾಪುರ, ಮಹೇಶ ಜೇಗರ್ ಸೇರಿದಂತೆ ಬೆಂಗಳೂರು ಮೂಲದ ಹತ್ತಾರು ಕ್ರೀಡಾಭಿಮಾನಿಗಳು ಹಾಗೂ ತಿರುಪತಿ ತಿಮ್ಮಪ್ಪನ ಭಕ್ತರು ಆರ್ಸಿಬಿ ತಂಡಕ್ಕೆ ಶುಭವಾಗಲಿ ಎಂದು ಜಯಘೋಷ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.