ADVERTISEMENT

ಮಹರ್ಷಿ ವಾಲ್ಮೀಕಿಗೆ ಜಾಲತಾಣದಲ್ಲಿ ಅಪಮಾನ: ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 15:37 IST
Last Updated 16 ಸೆಪ್ಟೆಂಬರ್ 2020, 15:37 IST
ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದಿಂದ ಸುಭಾಷ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು
ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದಿಂದ ಸುಭಾಷ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು   

ಯಾದಗಿರಿ: ಭಗವಾನ್‌ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳಿಗೆ ಅಟ್ರಾಸಿಟಿ ಹಾಗೂ ಗುಂಡಾ ಕಾಯ್ದೆ ಪ್ರಕರಣದಡಿಯಲ್ಲಿ ಕೇಸ್‌ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ತಹಶೀಲ್ದಾರ್ ಕಚೇರಿಯಿಂದ ಆರಂಭಿಸಿದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಶಕ್ತಿ ಪ್ರದರ್ಶನನಡೆಸಲಾಯಿತು.

ಮಹರ್ಷಿ ವಾಲ್ಮೀಕಿ ಅವರಿಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಒಂದರಲ್ಲಿ ಅವಮಾನಿಸಿ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ‌ಆಗ್ರಹಿಸಿದರು.

ADVERTISEMENT

ಲಿಂಗಸುಗೂರು ಗೋಳಪಲ್ಲಿ ವಾಲ್ಮೀಕಿ ಆಶ್ರಮದ ವರ್ದಾನೇಶ್ವರ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಕುರಿತು ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಅಶ್ಲೀಲವಾಗಿ ಚಿತ್ರಿಸಿ ಅಪಮಾನ ಮಾಡಿದ್ದಾರೆ. ಸರ್ಕಾರ ಕೂಡಲೇ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ನಾಯಕ ಮೊಗದಂಪುರ ಮಾತನಾಡಿ, ವಾಲ್ಮೀಕಿ ಮಹರ್ಷಿಗಳ ಕೊಡುಗೆಯನ್ನು ಪರಿಗಣಿಸದೆ ಅಪಚಾರ ಮಾಡಿರುವ ದ್ರೋಹಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಮುಖಂಡ ಚಳವಳಿ ರಾಜಣ್ಣ ಮಾತನಾಡಿ, ಕೆಲವು ವಿಕೃತ ಮನಸ್ಸಿನ ಕಿಡಿಗೇಡಿಗಳು ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಮತ್ತು ರಾಜ್ಯದಲ್ಲಿ ಕಾನೂನಿಗೆ ಭಂಗ ತರುವಂಥ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.ನಂತರ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೂ ಪ್ರತಿಭಟನಾಕಾರರು ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.

ಸಮಾಜದ ಮುಖಂಡರಾದ ಶ್ರವಣಕುಮಾರ, ಸಿದ್ದನಗೌಡ ಪಾಟೀಲ ಕರಿಬಾವಿ, ಬಾಲರಾಜನಕಲ್, ಅಜ್ರೇಪ್ಪ ನಾಯಕ, ಹಣಮಂತ ನಾಯಕ, ಮಶೆಪ್ಪ ನಾಯಕ, ಕೃಷ್ಣ ನಾನೇಕ, ಸಿದ್ದಲಿಂಗಪ್ಪ ನಾಯಕ, ಮರೆಪ್ಪ ಪ್ಯಾಟಿ ಶಹಾಪುರ, ಶೇಖರ ದೊರಿ, ಚಂದ್ರಕಾಂತ ಹತ್ತಿಕುಣಿ, ರಾಘವೇಂದ್ರ ಯಕ್ಷಿಂತಿ, ಅಶೋಕ ದೋರನಳ್ಳಿ, ಪ್ರಶಾಂತ ದಳವಾಯಿ, ವಿಶ್ವನಾಥ ನಾಯಕ, ಗೌಡಪ್ಪಗೌಡ ಅಲ್ದಾಳ, ಮಲ್ಲಿಕಾರ್ಜುನ ಶಿರವಾಳ, ಮನಸಪ್ಪ, ಬಸವರಾಜ, ಪರಮಣ್ಣ ಕಕ್ಕೇರಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಮಹರ್ಷಿ ವಾಲ್ಮೀಕಿ ಅವರಿಗೆ ಅಪಮಾನ ಮಾಡಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪಿಗಳನ್ನು ಶಿಕ್ಷಿಸಬೇಕು

- ಮರೆಪ್ಪ ನಾಯಕ ಮೊಗದಂಪುರ,ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.