ADVERTISEMENT

ಹೊರ ಗುತ್ತಿಗೆ ನೌಕರರ ಸಂಘದಿಂದ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

ಸೇವಾಭದ್ರತೆ, ನೇರವಾಗಿ ವೇತನ ನೀಡುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 3:39 IST
Last Updated 7 ಅಕ್ಟೋಬರ್ 2020, 3:39 IST
ಯಾದಗಿರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಅವರ ಬೇಡಿಕೆಗಳ ಕುರಿತು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಚರ್ಚಿಸಿದರು
ಯಾದಗಿರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಅವರ ಬೇಡಿಕೆಗಳ ಕುರಿತು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಚರ್ಚಿಸಿದರು   

ಯಾದಗಿರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನೌಕರರ ಸೇವಾ ಭದ್ರತೆ ನೀಡಬೇಕು. ಕಾಯಂ ನೌಕರರೆಂದು ಘೋಷಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಏಕರೂಪದ ವೇತನ ಜಾರಿ ಮಾಡಬೇಕು. ಮಧ್ಯವರ್ತಿಗಳಿಂದಲ್ಲದೆ ನೇರವಾಗಿ ವೇತನ ಪಾವತಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಭಾಗ್ಯ ಯೋಜನೆ ಈ ನೌಕರರಿಗೂ ವಿಸ್ತರಿಸಬೇಕು. ಸಣ್ಣಪುಟ್ಟ ನೆಪವೊಡ್ಡಿ ಕೆಲಸದಿಂದ ತೆಗೆಯುವ ಅನಾಗರಿಕ ಪದ್ಧತಿ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಗಾಗಿ ಪ್ರತಿಭಟನೆ ನಡೆಸಿದರು.

ADVERTISEMENT

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಭೇಟಿ ನೀಡಿ ನೌಕರರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಹೋರಾಟ ಮಾಡುವುದಾಗಿ ತಿಳಿಸಿದರು.

‘ಕಳೆದ ಒಂದು ವಾರದಿಂದ ನಿಮ್ಮ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಸರ್ಕಾರ ನಿಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಮುಂದಿನ ವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಗಮನ ಸೆಳೆಯುವಂತೆ ಮನವಿ ಮಾಡಲಾಗುವುದು’ ಎಂದರು.

‘ನಿಮ್ಮ ಬೇಡಿಕೆಗಳ ಈಡೇರಿಕೆಗೆ ಹಮ್ಮಿಕೊಂಡಿರುವ ಈ ಹೋರಾಟದಲ್ಲಿ ನನ್ನ ಬೆಂಬಲ ಹಾಗೂ ಸಹಕಾರ ಸದಾ ಇರಲಿದೆ. ಅಲ್ಲದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ನಡೆಸಲು ಸಿದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಡಾ.ಲಕ್ಷ್ಮಿಕಾಂತ್ ಮಾತನಾಡಿ, ‘ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ ಸಮಾನ ವೇತನ ನೀಡಬೇಕಿದೆ. ನಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರೆ, ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಸ್ಟಾಫ್‍ನರ್ಸ್ ವಿಜಯಲಕ್ಷ್ಮಿ, ರಾಚನಗೌಡ, ಗುಂಡು ಚವ್ಹಾಣ್‌, ಪ್ರಸಾದ ಮಿತ್ರಾ, ಚಿಮ್ಮಿ ರೋನಾಲ್ಡ್‌, ಧರಿನಾಯಕ ಜಾಧವ, ವಸಂತ, ಶಕುಂತಲಾ, ನಿರ್ಮಲಾ ಶಹಾಪುರ, ಮೇರಿ, ಕೃಷ್ಣಾ ಪವಾರ್, ಶಾಲಿನಿ, ಶಾರದಾ, ಭೀಮರಾಯ, ಮಸುದ್, ಶ್ರೀನಿವಾಸ, ಸುನೀತಾ, ಅನಿಲ್ ಹೆಡಗಿಮದ್ರಿ, ಸುರೇಶ್ ಅಲ್ಲಿಪುರ, ಉದಯ ದೊಡ್ಡಮನಿ, ಸಿದ್ದಪ್ಪ ಹೊರುಂಚಾ, ಮಾರ್ಥಂಡಪ್ಪ ಮೂಷ್ಟೂರ ಇದ್ದರು.

ಸಂಸದರಿಗೆ ಮನವಿ

ಯಾದಗಿರಿ: ಆರೋಗ್ಯ ಇಲಾಖೆಯ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರಿಯ ಆರೋಗ್ಯ ಅಭಿಯಾನ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂಸದ ರಾಜಾ ಅಮರೇಶ ನಾಯಕ ಅವರಿಗೆ ವಿವಿಧ ಬೇಡಿಕೆಗಾಗಿ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ದೇವಿಂದ್ರನಾಥ ನಾದ, ಗುರು ಕಾಮಾ, ನಗರಸಭೆ ಸದಸ್ಯ ಹಣಮಂತ ಇಟಗಿ, ಶಂಕರ್ ಸೋನಾರ್, ಚಂದ್ರಕಾಂತ ಚವ್ಹಾಣ್‌, ಶೇಖರ್ ದೊರೆ, ರಾಘವೇಂದ್ರ ಯಕ್ಷಿಂತಿ, ರಾಜಶೇಖರ ಕಾಡಂನೋರ, ಮಲ್ಲಣಗೌಡ ಗುರುಸುಣಿಗಿ, ವಿರೂಪಾಕ್ಷ ಸ್ವಾಮಿ ಹೆಡಗಿಮದ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.