ಶಹಾಪುರ: ರಾಜ್ಯದಲ್ಲಿ ಎಲ್ಲಿಯೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪರಿಶಿಷ್ಟ ಜಾತಿಯ ಸಮನ್ವಯ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ವಿವಿಧ ಹಳ್ಳಿಯಿಂದ ತಂಡೋಪತಂಡವಾಗಿ ಆಗಮಿಸಿದ ಪರಿಶಿಷ್ಟ ಸಮುದಾಯಗಳ ಮುಖಂಡರು ನಗರದ ವಾಲ್ಮೀಕಿ ವೃತ್ತದ ಬಳಿ ಜಮಾವಣೆಗೊಂಡರು. ಬುಡ್ಗ ಜಂಗಮ, ಶಿಳ್ಯಾಕ್ಯಾತ, ಸುಡುಗಾಡ ಸಿದ್ದರು ತಮ್ಮ ಸಂಪ್ರದಾಯ ಹಾಗೂ ಹೊಟ್ಟೆಪಾಡಿಗಾಗಿ ಧರಿಸುತ್ತಿರುವ ವಿವಿಧ ಬಗೆಯ ಪೋಷಾಕು ಧರಿಸಿ ಸರ್ಕಾರದ ವಿರುದ್ದ, ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಪೋಷಾಕು ಧರಿಸಿ ಬಂದಿದ್ದ ರಾಮ, ಲಕ್ಷ್ಮಣ, ರಾವಣ, ಹನುಮಂತ ಎಲ್ಲರೂ ಸೇರಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿದ ಬಗ್ಗೆ ಅಣುಕು ಪ್ರದರ್ಶನ ಮಾಡಿದರು. ಹಲಿಗೆ ಮೇಳ ಸಾಥ್ ನೀಡಿತು. ಅಲ್ಲದೆ ಸುಡುಗಾಡು ಸಿದ್ಧರು ತಮ್ಮ ಕೈ ಚಳಕದ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ಅಣುಕು ಪ್ರದರ್ಶನ ನೀಡಿದರು.
ಬೇಡಜಂಗಮ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರನ್ನು ಮತ್ತು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ವೀರಶೈವ ಲಿಂಗಾಯತ ಜಂಗಮರು ನಮಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿ ಎಂದು ಕೆಲ ಮಠಾಧೀಶರ ನೇತೃತ್ವದಲ್ಲಿ ಸತ್ಯ ಪ್ರತಿಪಾದನೆ ಹೋರಾಟದ ಹೆಸರಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ನಾಚಿಗೇಡು ಸಂಗತಿ ಎಂದು ಸಮಿತಿ ಮುಖಂಡರು ಆರೋಪಿಸಿದರು.
ಗ್ರೇಡ್-2 ತಹಶೀಲ್ದಾರ ಸೇತುಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದೇವಿಂದ್ರ ಹೆಗ್ಗಡೆ, ನೀಲಕಂಠ ಬಡಿಗೇರ, ಕಿಶನ್ ರಾಠೋಡ್, ಶಿವಪುತ್ರ ಜವಳಿ, ಶಾಂತಪ್ಪ ಕಟ್ಟಿಮನಿ, ಯಲ್ಲಪ್ಪ ದೊಡ್ಮನಿ, ರುದ್ರಪ್ಪ ಹುಲಿಮನಿ, ಅಮರೇಶ ವಿಭೂತಿಹಳ್ಳಿ, ವಾಸುದೇವ ಕಟ್ಟಿಮನಿ, ಶಿವಕುಮಾರ ತಳವಾರ, ವಸಂತ ಸುರಪುರ, ನಿಜಗುಣ ದೋರನಹಳ್ಳಿ, ಶರಣು ದೋರನಹಳ್ಳಿ, ಮಾನಸಿಂಗ್ ಚವ್ಹಾಣ, ವಿಜಯಕುಮಾರ ಎದುರುಮನಿ, ಬಾಬುರಾವ್ ಭೂತಾಳಿ, ರಾಮಣ್ಣ ಸಾದ್ಯಾಪುರ, ಭೀಮರಾಯ ಹೊಸ್ಮನಿ, ಮಲ್ಲಪ್ಪ ಗೋಗಿ, ಶಿವುಕುಮಾರ ತಳವಾರ, ಭೀಮರಾಯ, ಯಮನಪ್ಪ ರೇವಲ್, ಚಂದ್ರು ಚಕ್ರವರ್ತಿ, ವಿನೋದ ರಾಠೋಡ, ಗ್ಯಾನಪ್ಪ ಅಣಬಿ, ಮರೆಪ್ಪ ಜಾಲಿಬೆಂಚಿ, ಬಸವರಾಜ ತಳವಾರ, ಹೊನ್ನಪ್ಪ ಗಂಗನಾಳ, ರಾಯಪ್ಪ ಗಂಗನಾಳ, ಶರಣುರಡ್ಡಿ,ಬಸವರಾಜ ಪೂಜಾರಿ, ಹಣಮಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.