ಯಾದಗಿರಿ: ಸ್ಲಂ ಘೋಷಣೆ ಹಕ್ಕುಪತ್ರ ಮತ್ತು ನಿವೇಶನ ರಹಿತರಿಗೆ ನೀಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳ ಕಾಮಗಾರಿ ಕಳಪೆಯಾಗುರುವುದನ್ನು ಖಂಡಿಸಿ ಸ್ಲಂ ಜನಾಂದೋಲನ ಹಾಗೂ ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ, ನಗರದಲ್ಲಿ 15 ಸ್ಲಂಗಳು ಘೋಷಿತ ಸ್ಲಂಗಳಿದ್ದು, ಇನ್ನು 6 ರಿಂದ 8 ಅಘೋಷಿತ ಸ್ಲಂಗಳಿವೆ. ಆದರೆ, ಇದುವರೆಗೆ ಯಾವುದೇ ರೀತಿಯ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಿವೇಶನ ರಹಿತರಿಗೆ ನೀಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳ ಕಾಮಗಾರಿ ಕಳಪೆಯಾಗಿದೆ. ಇದರಲ್ಲಿ ಸ್ಲಂ ಅಧಿಕಾರಿಗಳು ಮತ್ತು ಇನ್ನಿತರರು ಶಾಮೀಲಾಗಿದ್ದು, ಸ್ಲಂ ಜನರಿಗೆ ಮೋಸ ಮಾಡಿರುತ್ತಾರೆ ಎಂದು ದೂರಿದರು. ತಕ್ಷಣ ಅವ್ಯವಹಾರ ತನಿಖೆ ಮಾಡಬೇಕು, ಅರ್ಹ ಪ್ರದೇಶಗಳನ್ನು ಸ್ಲಂ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸ್ಲಂ ಜನಾಂದೋಲನ ಜಿಲ್ಲಾಧ್ಯಕ್ಷ ಹಣಮಂತ ಶಹಾಪುರಕರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಆನಂದ ಚಟ್ಟೆರಕರ್, ಸಂಗೀತಾ ಹಪ್ಪಳ, ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಮಲ್ಲಿಕಾರ್ಜುನ ಸಾಂಗ್ಲಿಯಾನ, ಬಾಬುಮಿಯಾ, ವಿಶ್ವನಾಥ ನಾಯ್ಕೋಡಿ, ಶಂಕ್ರಮ್ಮ ಕೊಟಿಮನಿ ಸಂಗೀತಾ ಅರಕೇರಿ, ನಿರ್ಮಲಾ ಸುಂಗಲ್ಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.