ಯಾದಗಿರಿ: ನಗರದಲ್ಲಿ ಸುಮಾರು 42–43 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ಹೆಚ್ಚಳದಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಪ್ರಧಾನ ಮಂತ್ರಿ ಉದ್ಯೋಗ ಕೌಶಲ ಕೇಂದ್ರದ ಮುಂಭಾಗ ಹಾಗೂ ಮಧ್ಯಾಹ್ನದ ವೇಳೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಮಜ್ಜಿಗೆ ವಿತರಿಸಲಾಗುತ್ತಿದೆ.
ನಗರದ ಕೋರ್ಟ್, ತಹಶೀಲ್ದಾರ್ ಕಚೇರಿ ಇನ್ನಿತರ ಸರ್ಕಾರಿ ಕಚೇರಿಗಳಿಗೆ ನಿತ್ಯ ಜನರು ವಿವಿಧ ಕೆಲಸ ಕಾರ್ಯಕ್ಕಾಗಿ ಬರುತ್ತಾರೆ. ಹಣಕಾಸಿನ ಸ್ಥಿತಿವಂತರು ಅಂಗಡಿಗಳಲ್ಲಿ ಹಣ ಕೊಟ್ಟು ನೀರು ಖರೀದಿಸಿ ಕುಡಿಯುತ್ತಾರೆ. ಆದರೆ, ಬಡವರು ಹಣ ನೀಡಿ ನೀರು ಕುಡಿಯುವುದು ಕಡಿಮೆ. ಹೀಗಾಗಿಯೇ ಶುದ್ಧ ಕುಡಿವ ನೀರು, ಮಜ್ಜಿಗೆ ವಿತರಿಸಲು ಪ್ರೇರಣೆಯಾಗಿದೆ ಎಂದು ಉದ್ಯಮಿ ತಿಳಿಸಿದರು.
‘ಮೇ 4ರಿಂದ ಮಜ್ಜಿಗೆ, ಕುಡಿವ ನೀರು ವಿತರಿಸಲಾಗುತ್ತಿದೆ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಉಚಿತವಾಗಿ ಮಜ್ಜಿಗೆ ಪೂರೈಸಲಾಗುತ್ತಿದೆ. ನೀರು ಬೆಳಗ್ಗೆಯಿಂದ ಸಂಜೆವರೆಗೆ ವಿತರಿಸಲಾಗುವುದು’ ಎಂದು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಸವರಾಜು ಹೊಸಳ್ಳಿ ಹೇಳಿದರು.
‘ಶುದ್ಧ ನೀರು, ಮಜ್ಜಿಗೆ ತಯಾರಿಸಲು ₹ 850 ಖರ್ಚಾಗುತ್ತದೆ. ಆರಂಭದಲ್ಲಿ 18 ಕ್ಯಾನ್ ಶುದ್ಧ ಕುಡಿವ ನೀರು ಬಳಕೆಯಾಗುತ್ತಿತ್ತು. ಈಗ 12 ಕ್ಯಾನ್ಗಳು ಖರ್ಚಾಗುತ್ತಿದೆ. ಸುಮಾರು 400 ಜನರು ಇದರ ಪ್ರಯೋಜನ ಪಡೆಯುತ್ತಾರೆ’ ಎನ್ನುತ್ತಾರೆ ಅವರು.
ಪ್ರಧಾನ ಮಂತ್ರಿ ಉದ್ಯೋಗ ಕೌಶಲ ಕಚೇರಿ ಮುಂಭಾಗ 30 ಲೀಟರ್, ಜಿಲ್ಲಾ ಆಸ್ಪತ್ರೆ ಬಳಿ 20 ಲೀಟರ್ ಮಜ್ಜಿಗೆ ವಿತರಿಸಲಾಗುತ್ತಿದೆ ಎಂದು ಬಸವರಾಜು ಮಾಹಿತಿ ನೀಡುತ್ತಾರೆ.
ಹಣ ನೀಡಿ ಶುದ್ಧ ನೀರು, ಮಜ್ಜಿಗೆ ಕುಡಿಯುವುದು ಬಡವರಿಗೆ ಹೊರೆಯಾಗುತ್ತಿದೆ. ಆದರೆ, ಇಲ್ಲಿ ಮಜ್ಜಿಗೆಯನ್ನು ಉಚಿತವಾಗಿ ನೀಡುತ್ತಿರುವುದು ಮೆಚ್ಚುವ ಕಾರ್ಯ ಎಂದು ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೈತ ಸಿದ್ದಪ್ಪ ಪೂಜಾರಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.