
ಯಾದಗಿರಿ: ಬೆಂಗಳೂರು–ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಓಡಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೊಸ ರೈಲು ಗಾಡಿಯನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮೂಲಕ ಓಡಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದರು.
ನಗರದ ಚಿತ್ತಾಪೂರ ರಸ್ತೆಯಲ್ಲಿ ಇರುವ ಆಂಜನೇಯ ದೇವಸ್ಥಾನ ಆವರಣದಲ್ಲಿ ಗುರುವಾರ ಸಭೆ ನಡೆಸಿದ ಹೋರಾಟಗಾರರು, ಭಿತ್ತ ಪತ್ರ ಹಿಡಿದು ಒತ್ತಾಯಿಸಿದರು.
ದಶಕಗಳಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಉದ್ಯಾನ್ ಎಕ್ಸ್ಪ್ರೆಸ್ ಸಂಚರಿಸುತ್ತಿದ್ದು, ಪ್ರಯಾಣಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಅನಿವಾರ್ಯವಾಗಿ ಬಸ್ ಅಥವಾ ವಿಮಾನಗಳನ್ನು ಬಳಸುವಂತಹ ಅನಿವಾರ್ಯವಿದೆ. ಈ ಎರಡೂ ಮಹಾನಗರಗಳ ನಡುವೆ ಹೆಚ್ಚುವರಿ ರೈಲು ಓಡಿಸುವ ಬಹುದಿನಗಳಿಂದ ಆಗ್ರಹಿಸುತ್ತಿದ್ದೇವೆ ಎಂದು ಉಮೇಶ ಕೆ. ಮುದ್ನಾಳ ಹೇಳಿದ್ದಾರೆ.
ಬೆಂಗಳೂರು- ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಹುಬ್ಬಳ್ಳಿ ಮಾರ್ಗವಾಗಿ ಈಗಾಗಲೇ 3–4 ರೈಲುಗಳು ಚಲಿಸುತ್ತಿವೆ. ಆ ಮಾರ್ಗದ ಬದಲು ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಮಾರ್ಗವಾಗಿ ಈ ರೈಲು ಓಡಿಸಬೇಕು. ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ನಮ್ಮ ಭಾಗಕ್ಕೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಸಭೆಯಲ್ಲಿ ಪ್ರಮುಖರಾದ ದೊಡ್ಡಯ್ಯಸ್ವಾಮಿ, ನಾಗರಡ್ಡಿ ಮಾಲಿ ಪಾಟೀಲ, ನಾನಾಗೌಡ ಪಾಟೀಲ, ಚಂದ್ರಶೇಖರ ತಂಬಾಕೆ, ನಾಗೇಂದ್ರ ಭೀಮನಹಳ್ಳಿ, ರಾಮು ರಾಠೋಡ, ಪವನ, ಸಾಬಣ್ಣ ಸಲೀಂ, ಪರ್ಸರ್, ಜಮಾಲ್, ಶರಣಪ್ಪ, ರಿಯಾಜ್, ಬನ್ನಪ್ಪ, ರವಿ, ಸಾಬಣ್ಣ, ಬಸಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.