ಸುರಪುರ:ರಾಮನವಮಿ ಅಂಗವಾಗಿ ಶುಕ್ರವಾರ ಶ್ರೀರಾಮಸೇನೆ ವತಿಯಿಂದ ಶ್ರೀರಾಮ ಮತ್ತು ವೀರಾಂಜನೆಯ ಮೂರ್ತಿಗಳ ಮೆರವಣಿಗೆ ಜರುಗಿತು. ರಾಮ ಭಕ್ತರ ಘೋಷಣೆಗಳು ಮುಗಿಲು ಮುಟ್ಟಿದವು.
ವೇಣು ಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇವಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ, ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಗುಡದಿನ್ನಿ ಕಾಳಿಕಾ ದೇವಿ ಅರ್ಚಕ ರಾಮರಾವಬಾಬಾ ಮೆರವಣಿಗೆಗೆ ಚಾಲನೆ ನೀಡಿದರು.
ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ‘ಸನಾತನ ಪರಂಪರೆಯಲ್ಲಿ ಶ್ರೀರಾಮ ಮತ್ತು ಆಂಜನೇಯನಿಗೆ ಅಗ್ರಸ್ಥಾನವಿದೆ. ಈ ಪರಂಪರೆಯನ್ನು ಯುವಕರು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ. ಅದರಲ್ಲಿ ವಿಶೇಷವಾಗಿ ಮುಸ್ಲಿಂ ಬಾಂಧವರು ಕೇಸರಿ ಶಾಲು ಹಾಕಿಕೊಂಡು ತಂಪು ಪಾನೀಯ ನೀಡುವ ಮೂಲಕ ಭಾವೈಕ್ಯ ತೋರಿರುವುದು ಒಳ್ಳೆಯ ಬೆಳವಣಿಗೆ’ ಎಂದರು.
ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪ್ರಮುಖ ರಸ್ತೆಗಳು ಕೇಸರಿ ಧ್ವಜಗಳಿಂದ ರಾರಾಜಿಸುತ್ತಿದ್ದವು. ವಿವಿಧ ಗ್ರಾಮಗಳಿಂದ ರಾಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅಟೋ, ಟಂಟಂ, ಬೈಕ್ಗಳಿಗೆ ಕೇಸರಿ ಧ್ವಜಗಳನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಜೈ ಶ್ರೀರಾಮ ಎಂದು ಘೋಷಣೆ ಹಾಕುತ್ತಾ ಓಡಾಡುತ್ತಿದ್ದರು. ಶೋಭಾಯಾತ್ರೆಯಲ್ಲಿ ಯುವಕರು ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು
ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ, ರಾಮಸೇನಾ ಮುಖಂಡರಾದ ಶರಣುನಾಯಕ ಡೊಣ್ಣಿಗೇರಾ, ಶರಣುನಾಯಕ ದಿವಳಗುಡ್ಡ ,ರಂಗನಗೌಡ ಪಾಟೀಲ ದೇವಿಕೇರಾ, ಸೇರಿದಂತೆ ಹಲವಾರು ಸಂಖ್ಯೆಯಲ್ಲಿ ಮುಖಂಡರು, ಯುವಕರು ಹಾಗೂ ರಾಮನ ಭಕ್ತರು ಭಾಗವಹಿಸಿದ್ದರು.
ಭಾವ್ಯಕ್ಯತೆ ಮೆರೆದ ಮುಸ್ಲಿಂ ಬಾಂಧವರು: ಶೋಭಾಯಾತ್ರೆಯಲ್ಲಿ ಭಾಗವಹಿಸಿದವರಿಗೆ ಮುಸ್ಲಿಂ ಬಾಂಧವರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೀರು ಮತ್ತು ತಂಪು ಪಾನೀಯ ವಿತರಿಸಿ ಭಾವೈಕ್ಯೆತೆ ಮೆರೆದರು.
ಕೆಲ ಮುಸ್ಲಿಂ ಬಾಂಧವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.