ಶಿವಲಿಂಗ ಕುಂಬಾರ
ಹೊನಗೇರಾ (ಯರಗೋಳ): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ಗ್ರಾಮದ ಯುವಕ ಶಿವಲಿಂಗ ಚಂದಪ್ಪ ಕುಂಬಾರ ( 17) ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.
ಕಳೆದ ಎರಡು ದಶಕಗಳಿಂದ ಬೆಂಗಳೂರಿನ ಸಣ್ಣೂರಿನಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಿಮ್ಮಮ್ಮ ಚಂದಪ್ಪ ಕುಂಬಾರ ದಂಪತಿಗೆ ಮೂರು ಜನ ಮಕ್ಕಳು. ಕೊನೆಯ ಪುತ್ರ ಶಿವಲಿಂಗ ಬೆಂಗಳೂರಿನ ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ.
ಶಿವಲಿಂಗ ಬುಧವಾರ ಮಧ್ಯಾಹ್ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿಜಯದ ಸಂಭ್ರಮ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಮಗನನ್ನು ತಾಯಿ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮೃತ ಶಿವಲಿಂಗನ ಜೇಬಿನಲ್ಲಿದ್ದ ಮೊಬೈಲ್ ನ ಕರೆ ಸ್ವೀಕರಿಸಿ 'ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿದೆ. ಬೌರಿಂಗ್ ಆಸ್ಪತ್ರೆಗೆ ಬನ್ನಿ' ಅಂತ ಪ್ರತಿಕ್ರಿಯಿಸಿದ್ದಾರೆ.
ಕೂಡಲೇ ಕುಟುಂಬದ ಸದಸ್ಯರು ಬೌರಿಂಗ್ ಆಸ್ಪತ್ರೆಗೆ ತೆರಳಿದಾಗ ಮೃತ ಶಿವಲಿಂಗನ ಶವ ನೋಡಿ ಬರಸಿಡಿಲು ಬಡಿದಂತಾಗಿದೆ. ಪೊಲೀಸರಿಗೆ ಕೇಳಿದಾಗ 'ನಿಮ್ಮ ಮಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭದಲ್ಲಿ ನಡೆದ ಕಾಲ್ತುಳಿತದಿಂದ ಮೃತಪಟ್ಟಿದ್ದಾನೆ. ಎಲ್ಲಿ ನೀವು ಆಘಾತಗೊಳ್ಳುತ್ತೀರಿ ಎಂದು ನಾವು ಆಕ್ಸಿಡೆಂಟ್ ಆಗಿದೆ ಬನ್ನಿ ಅಂತ ಹೇಳಿದ್ದು' ಎಂದು ಪೊಲೀಸರು ತಿಳಿಸಿದ್ದಾಗಿ ಶಿವಲಿಂಗನ ಸಹೋದರ ಹೊನ್ನಪ್ಪ ಕುಂಬಾರ 'ಪ್ರಜಾವಾಣಿ'ಗೆ ತಿಳಿಸಿದರು.
'ತಮ್ಮನ ಎದೆಯ ಮೇಲೆ ತುಳಿತದ ಗಾಯಗಳಾಗಿದ್ದವು. ಅವನು ದುರಂತದಲ್ಲಿ ಸಾವನ್ನಪ್ಪಿದ್ದು ನಮಗೆ ಏನೂ ತೋಚದಂತಾಗಿದೆ' ಎಂದರು.
'ಮೃತ ಮಗನ ಶವ ಹೂಳಲು ಚಂದಪ್ಪನಿಗೆ ಸ್ವಂತ ಹೊಲ ಇಲ್ಲದಿರುವುದಕ್ಕೆ ಆಶನಾಳ ಗ್ರಾಮದ ಸೋದರ ಮಾವನ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ' ಎಂದು ಕುಟುಂಬದ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.