ADVERTISEMENT

ದೀಪೋತ್ಸವದಿಂದ ಸಾಮರಸ್ಯ: ಶ್ರೀಶೈಲಂ ಜಗದ್ಗುರು

ಶಿವನ ಒಲುಮೆ ಗಳಿಸಿ, ಮಾನವೀಯ ಮೌಲ್ಯ ನೀಡಿರುವ ಹೇಮರೆಡ್ಡಿ ಮಲ್ಲಮ್ಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 5:09 IST
Last Updated 8 ಡಿಸೆಂಬರ್ 2020, 5:09 IST
ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 9ನೇ ದೀಪೋತ್ಸವಕ್ಕೆ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು
ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 9ನೇ ದೀಪೋತ್ಸವಕ್ಕೆ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು   

ಯಾದಗಿರಿ: ಕಾರ್ತಿಕ ಮಾಸದ ಪವಿತ್ರ ದಿನಗಳಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಲಕ್ಷ ದೀಪೋತ್ಸವ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಭಕ್ತರಲ್ಲಿ ಪರಸ್ಪರ ಸಾಮರಸ್ಯ ಮೂಡಿಸಿದೆ. ಇದು ಎಲ್ಲರ ಬದುಕಿನಲ್ಲಿ ಪರಿವರ್ತನೆಗೆ ನಾಂದಿಯಾಗಲಿ ಎಂದು ಶ್ರೀಶೈಲಂ ಪೀಠದ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಗದಗನ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ 9ನೇ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಮಲ್ಲಮ್ಮ ತನ್ನ ಸಾಂಸಾರಿಕ ಬದುಕಿನ ಜೊತೆಗೆ ಆಧ್ಯಾತ್ಮಿಕ ಸಾಧನೆ ಮಾಡುವ ಮೂಲಕ ಶಿವನ ಒಲುಮೆ ಗಳಿಸಿ, ನಾಗರಿಕ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ನೀಡಿದರ ಪರಿಣಾಮವಾಗಿ ಇನ್ನೂ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ತಿಳಿಸಿದರು.

ADVERTISEMENT

ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡದವರನ್ನು ರಾಜ್ಯ ಸರ್ಕಾರ ಹಿಂದುಳಿದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಅಂದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ನಾವು ಇನ್ನೂ ಅನೇಕರು ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದರು.

ಶ್ರೀಶೈಲಂ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್‌.ರಾಮರಾವ್ ಕನ್ನಡದಲ್ಲಿಯೇ ಮಾತನಾಡಿ, ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಭಕ್ತರು ಪ್ರತಿ ವರ್ಷ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಅವರಿಗೆ ನಾವು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಒತ್ತು ನೀಡಿದ್ದೇವೆ ಎಂದು ಹೇಳಿದರು.

ಇಲ್ಲಿ ಕನ್ನಡಿಗ ಭಕ್ತರು ಭವ್ಯ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ತಮ್ಮ ಭಕ್ತಿ-ಭಾವ ಮೆರೆದಿದ್ದಾರೆ. ಇಲ್ಲಿ ಅವರು ಹಮ್ಮಿಕೊಳ್ಳುವ ಪ್ರತಿಯೊಂದು ಪೂಜಾ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯ ಸಹಾಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಶ್ರೀಗಳಾದ ಮಲ್ಲಿಕಾರ್ಜುನ ಶಿವಾಚಾರ್ಯರು ನೆರೆಗಲ್ ಹಾಗೂ ಅಭಿನವ ಶಾಂತಲಿಂಗ ಶಿವಾಚಾರ್ಯರು ಅಮೀನಬಾವಿ ಮಾತನಾಡಿ ಮಲ್ಲಮ್ಮಳ ಬದುಕು, ಪವಾಡಗಳನ್ನು ವಿವರಿಸಿದರು.

ಜಾಗೃತ ವೇದಿಕೆಯ ಅಧ್ಯಕ್ಷ ಅನೀಲಕುಮಾರ ತೆಗ್ಗಿನಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಯುವ ಸಂಘಟನೆಯ ಉದ್ದೇಶಗಳ ಮಾಹಿತಿ ನೀಡಿದರು.

ಶ್ರೀಶೈಲಂ ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳಾದ ಹರಿದಾಸ್, ಸಾಯಿಕುಮಾರ, ಮಲ್ಲಮ್ಮ ದೇವಸ್ಥಾನದ ಮುಖ್ಯ ಅರ್ಚಕ ಗುರುಪಾದಯ್ಯ ಸ್ವಾಮಿ, ಓಂಕಾರಯ್ಯಸ್ವಾಮಿ, ವೀರಭದ್ರಶಾಸ್ತ್ರಿ, ಗದಗನ ಜಿ.ಪಂ ಉಪಾಧ್ಯಕ್ಷ ಶೋಭಾ ಮೇಟಿ, ಶರಣೆ ನೀಲಮ್ಮ, ಮಂಜುನಾಥರೆಡ್ಡಿ, ರವಿಸಿಂಗನಾಳ್ ಗಂಗಾವತಿ, ಪ್ರಭು ಶಿರೂರ, ಭಾಸ್ಕರರೆಡ್ಡಿ, ಪವಿತ್ರಾರೆಡ್ಡಿ, ಬಸವಂತರೆಡ್ಡಿ ಮಲ್ಹಾರ ಯಾದಗಿರಿ, ಮಾಣಿಕರೆಡ್ಡಿ ಕುರಕುಂದಿ, ಶರಣಗೌಡ ಪಾಟೀಲ್ ಯಡ್ಡಳ್ಳಿ, ಬಸವಂತ್ರಾಯಗೌಡ ನಾಯ್ಕಲ್, ಲಕ್ಷ್ಮೀಕಾಂತರೆಡ್ಡಿ ಬೊಮಶೆಟ್ಟಹಳ್ಳಿ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ದರು.

ಶ್ರೀಶೈಲಂ ಕ್ಷೇತ್ರಕ್ಕೂ ಕನ್ನಡಿಗರಿಗೂ ಸಾವಿರಾರು ವರ್ಷಗಳ ಸಂಬಂಧವಿದೆ. ಈ ಕ್ಷೇತ್ರದ ಪ್ರಗತಿಗೆ ಅವರು ನೀಡಿರುವ ಕೊಡುಗೆ ಅಪಾರ. ಇಲ್ಲಿನ ಆಡಳಿತ ವರ್ಗ ಕೂಡ ಭಕ್ತರನ್ನು ಗೌರವದಿಂದ ಕಾಣುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.